
25 ವರ್ಷಗಳ ಹಿಂದೆ ಈ ದಿನ
ಮಹಾ ಕುಂಭಮೇಳ ಆರಂಭ
ಅಲಹಾಬಾದ್, ಜ. 9 (ಪಿಟಿಐ)– ತೀವ್ರ ಚಳಿಯ ವಾತಾವರಣ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಸುಮಾರು 15 ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದರೊಂದಿಗೆ ಜಗತ್ತಿನ ಅತಿದೊಡ್ಡ ಸಮುದಾಯ ಸ್ನಾನ ಸಮಾವೇಶವಾದ ಹಾಗೂ ಸಹಸ್ರಮಾನದ ಮೊದಲನೆಯದಾದ ‘ಮಹಾ ಕುಂಭಮೇಳ’ ಇಂದು ಇಲ್ಲಿ ಆರಂಭವಾಯಿತು. ದೇಶ, ವಿದೇಶಗಳ ಭಕ್ತರು ಸೋಮವಾರ ರಾತ್ರಿಯಿಂದಲೇ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಆರಂಭಿಸಿದ್ದರೂ ರಾತ್ರಿ 2 ಗಂಟೆಯ ನಂತರ ‘ಪೌಷ ಪೌರ್ಣಮಿ’ಯ ಪವಿತ್ರ ಸ್ನಾನ ಔಪಚಾರಿಕವಾಗಿ ಆರಂಭವಾಯಿತು. ಜನರು ಸ್ನಾನದ ನಂತರ ಹಣೆಯ ಮೇಲೆ ಕುಂಕುಮ, ವಿಭೂತಿ, ಗಂಧದ ಪಟ್ಟೆ ಬಳಿದು ಗಂಗಾ ಪೂಜೆ ಮಾಡಿದರು.
ರೈತರಿಂದ ಎಪಿಎಂಸಿ ಕಚೇರಿಗೆ ಮುತ್ತಿಗೆ: ಲಾಠಿ ಪ್ರಹಾರ
ರಾಯಚೂರು, ಜ. 9– ಕಳೆದ ಮೂರು ದಿನಗಳಿಂದ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದನ್ನು ಪ್ರತಿಭಟಿಸಿ ರೊಚ್ಚಿಗೆದ್ದ ಸಾವಿರಾರು ರೈತರು ರಸ್ತೆತಡೆ ನಡೆಸಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಗೆ ಮುತ್ತಿಗೆ ಹಾಕಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದುದನ್ನು ಗಮನಿಸಿದ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದರು. ರೈತರು 2 ಗಂಟೆ ರಸ್ತೆತಡೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.