ಶ್ರೀನಗರ, ಆ. 6 (ಯುಎನ್ಐ, ಪಿಟಿಐ)– ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯ ಕುಪ್ವಾರದ ನಟ್ಯುಷಾ ಗ್ರಾಮದಲ್ಲಿರುವ ಸೇನಾ ಶಿಬಿರದ ಮೇಲೆ ರಾತ್ರಿ ದಾಳಿ ನಡೆಸಿರುವ ಉಗ್ರಗಾಮಿಗಳು, ಕನಿಷ್ಠ ಐವರು ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಉಗ್ರರು ಸಹ ಸತ್ತಿದ್ದಾರೆ.
ಸತ್ತವರಲ್ಲಿ ಒಬ್ಬರು ಮೇಜರ್, ಇಬ್ಬರು ಕಿರಿಯ ಸೇನಾಧಿಕಾರಿಗಳು ಹಾಗೂ ಇಬ್ಬರು ಸೈನಿಕರು ಸೇರಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಬೊಮ್ಮಾಯಿ, ಗೌಡರ ಜನತಾದಳ ಪ್ರೇಮ: ಹೆಗಡೆ ಲೇವಡಿ
ಬೆಂಗಳೂರು, ಆ. 6– ಜನತಾದಳವನ್ನು ಹುಟ್ಟುಹಾಕಲು ಹಿಂದೆ ವಿರೋಧ ವ್ಯಕ್ತ
ಪಡಿಸಿದ್ದ ಎಚ್.ಡಿ.ದೇವೇಗೌಡ ಮತ್ತು ಎಸ್.ಆರ್.ಬೊಮ್ಮಾಯಿ ಅವರಂಥವರು ಈಗ ತಮ್ಮ ಬಣವೇ ನಿಜವಾದ ದಳ ಎಂದು ವಾದಿಸುತ್ತಿರುವುದು ಹಾಸ್ಯಾಸ್ಪದ ಎಂದು ಲೋಕಶಕ್ತಿಯ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಹೆಗಡೆ ಟೀಕಿಸಿದರು.
ನಗರದ ಹೊರವಲಯದ ವಿಹಾರಧಾಮ ವೊಂದರಲ್ಲಿ ಇಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಯಪ್ರಕಾಶ್ ನಾರಾಯಣ್ ಅವರ ತತ್ವದ ಮೇಲೆ ದಳವನ್ನು ಕಟ್ಟಲು ಹೊರಟಾಗ ದೇವೇಗೌಡರು ಗೂಂಡಾಗಳೊಂದಿಗೆ ಸೇರಿಕೊಂಡು ಅಸಹಕಾರ ತೋರಿದರು. ಬೊಮ್ಮಾಯಿ ಇಬ್ಬಂದಿತನ ಪ್ರದರ್ಶಿಸಿದರು. ಈಗ ಇವರು ಒಂದು ಸಣ್ಣ ಬಣದಲ್ಲಿದ್ದರೂ ತಾವೇ ದಳದ ಮೂಲಪುರುಷರು ಎಂಬಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.