
ಕಾವೇರಿ ಜಲ ವಿದ್ಯುತ್ ಯೋಜನೆ ಮೇ 20ರಂದು ಮಹತ್ವದ ಸಭೆ
ನವದೆಹಲಿ, ಮೇ 8– ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಅಂತರರಾಜ್ಯ ಜಲ ವಿದ್ಯುತ್ ಯೋಜನೆಗಳ ಒಡಂಬಡಿಕೆ ಪತ್ರದ ಅಂತಿಮ ಕರಡನ್ನು ಕರ್ನಾಟಕ ಮತ್ತು ತಮಿಳುನಾಡಿಗೆ ಕಳುಹಿಸ
ಲಾಗಿದ್ದು ಈ ತಿಂಗಳ 20ರ ನಂತರ ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಎರಡೂ ರಾಜ್ಯಗಳ ಜತೆ ಮಹತ್ವದ ಸಭೆ ನಡೆಸಲಿದೆ.
ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಲು ಉದ್ದೇಶಿಸಿರುವ ನಾಲ್ಕು ಜಲ ವಿದ್ಯುತ್ ಯೋಜನೆಗಳ ಫಲಾನುಭವಿ ರಾಜ್ಯಗಳ ಪಟ್ಟಿಯಲ್ಲಿ ಪುದಚೇರಿ ಮತ್ತು ಕೇರಳವನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ದಳ ವಿದ್ಯಮಾನ: ಸಚಿವರಿಂದಲೇ ಅಪಸ್ವರ
ಬೆಂಗಳೂರು, ಮೇ 8– ಜನತಾದಳದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೆಗಲ ಮೇಲೆ ಕೈಹಾಕಿ ಉಪಾಹಾರ ಹಾಗೂ ಭೋಜನ
ಕೂಟಗಳನ್ನು ನಡೆಸಿ ಪಕ್ಷದಲ್ಲಿ ಒಗ್ಗಟ್ಟು ಮೂಡಿಬಂದಿದೆ ಎಂದು ಹೇಳುತ್ತಿರುವುದಕ್ಕೆ ಪಕ್ಷದ ಹಿರಿಯ ಸಚಿವರಿಂದಲೇ ಅಪಸ್ವರ ವ್ಯಕ್ತವಾಗಿದೆ.
ಕಳೆದ ಒಂದೂವರೆ ವರ್ಷದಿಂದ ದೇವೇಗೌಡರ ಬೆಂಬಲಿಗರದ್ದು ಒಂದು ಗುಂಪು ಹಾಗೂ ಮುಖ್ಯಮಂತ್ರಿ ಪಟೇಲ್ ಅವರ ಬೆಂಬಲಿಗರದ್ದು ಮತ್ತೊಂದು ಗುಂಪು ಎಂಬುದಾಗಿ ಜನತಾದಳದಲ್ಲಿ ಸ್ಪಷ್ಟವಾಗಿ ಕೆಲಸ ಮಾಡಿದವು. ಆದರೆ ಈಗ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಹತ್ತಿರಕ್ಕೆ ಬಂದಿವೆ ಎಂಬ ಕಾರಣದಿಂದ ಈ ನಾಯಕರು ಹಿಂದಿನ ಕಹಿ ಅನುಭವಗಳನ್ನು ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೆಗಲ ಮೇಲೆ ಕೈ ಹಾಕಿಕೊಂಡು ಭಾಯಿ ಭಾಯಿ ಹೇಳಿದರೆ ಪಕ್ಷದ ಒಗ್ಗಟ್ಟಿಗೆ ಅರ್ಥವಿದೆಯೇ ಎಂಬ ಪ್ರಶ್ನೆ ಕೆಲವು ಹಿರಿಯ ಸಚಿವರನ್ನು ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.