ನವದೆಹಲಿ, ಏ. 23– ರಾಷ್ಟ್ರದಲ್ಲಿ, ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನ ದಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿರುವ ಜನರ ನೆರವಿಗೆ ಧಾವಿಸುವಂತೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ರಾಷ್ಟ್ರದ ಜನತೆಗೆ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ನಿಸರ್ಗ ವಿಕೋಪ ನಿಧಿ ಮತ್ತು ಇತರ ಯೋಜನೆಗಳಿಂದ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡುತ್ತಿದೆ. ಆದರೆ ಬರಗಾಲಕ್ಕೆ ತುತ್ತಾಗಿರುವ ಜನ ಮತ್ತು ಜಾನುವಾರುಗಳ ಸಂಖ್ಯೆಯನ್ನು ಗಮನಿಸಿದರೆ ಸರ್ಕಾರದ ಈ ಹಣ ಸಾಲುವುದಿಲ್ಲ. ಆಹಾರ, ಮೇವು, ಇತರ ಸೌಲಭ್ಯಗಳಿಗೆ ಅಪಾರ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ ಎಂದು ತಿಳಿಸಿದರು.
‘ನೀವೆಲ್ಲ ಕೈಗೂಡಿಸಿದರೆ ಮಾತ್ರ ಸಂಕಷ್ಟದಲ್ಲಿರುವ ಜನರನ್ನು ಸಂರಕ್ಷಿಸಬಹುದು’ ಎಂದು ವಾಜಪೇಯಿ ಅವರು ತಿಳಿಸಿದರು.
ವರ್ಷದ ಬಳಿಕ ಮರಳಿದ 19 ಮೀನುಗಾರರು
ಚನ್ನೈ, ಏ. 23 (ಪಿಟಿಐ)– ಅಪರಾಧ ಎಸಗದಿದ್ದರೂ ಪಾಕಿಸ್ತಾನ ಮತ್ತು ಇರಾನ್ನ ಜೈಲುಗಳಲ್ಲಿ ಕಳೆದ ಒಂದು ವರ್ಷದಿಂದ ಬಂಧಿತರಾಗಿದ್ದ 19 ಮಂದಿ ಮೀನುಗಾರರು ಇಂದು ತಾಯ್ನಾಡಿಗೆ ವಾಪಸಾದರು. ಈ ಸಂದರ್ಭದಲ್ಲಿ ಅವರಿಗೆ ಹಾರ್ದಿಕ ಸ್ವಾಗತ ನೀಡಲಾಯಿತು.
ಕಳೆದ ವರ್ಷದ ಫೆಬ್ರುವರಿ 16ರಂದು ಮೀನು ಹಿಡಿಯುವ ಗುತ್ತಿಗೆ ಮೇಲೆ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮೀನುಗಾರರು ಆಕಸ್ಮಿಕವಾಗಿ ಇರಾನ್ನ ಜಲಪ್ರದೇಶವನ್ನು ಪ್ರವೇಶಿಸಿದ್ದರಿಂದ ಇರಾನ್ನ ಅಧಿಕಾರಿಗಳು ಬಂಧಿಸಿದ್ದರು.
ವಿಚಾರಣೆ ಬಳಿಕ ಈ ಕೈದಿಗಳನ್ನು ಇರಾನ್ ಅಧಿಕಾರಿಗಳು ಪಾಕ್ಗೆ ಹಸ್ತಾಂತರಿಸಿ, ಭಾರತಕ್ಕೆ ಒಪ್ಪಿಸುವಂತೆ ಕೇಳಿಕೊಂಡಿದ್ದರು. ಆದರೆ ಪಾಕಿಸ್ತಾನಿ ಅಧಿಕಾರಿಗಳು ಅವರನ್ನು ಕ್ವೆಟ್ಟಾದ ಜೈಲಿನಲ್ಲಿ ಹಲವು ತಿಂಗಳುಗಳ ಕಾಲ ಬಂಧನದಲ್ಲಿ ಇರಿಸಿದ್ದರು. ಬಳಿಕ ಅವರನ್ನು ಕರಾಚಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.