ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 18 ಮಾರ್ಚ್ 1997

ಪ್ರಜಾವಾಣಿ ವಿಶೇಷ
Published 17 ಮಾರ್ಚ್ 2022, 16:39 IST
Last Updated 17 ಮಾರ್ಚ್ 2022, 16:39 IST
   

ಕಲ್ಪನಾಥ ರಾಯ್‌ಗೆ ಹತ್ತು ವರ್ಷ ಜೈಲು: ಟಾಡಾ ಕೋರ್ಟ್‌ ತೀರ್ಪು
ನವದೆಹಲಿ, ಮಾ. 17 (ಪಿಟಿಐ)–
ಭೂಗತ ದೊರೆ ದಾವೂದ್‌ ಇಬ್ರಾಹಿಂ ಸಹಚರರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ ಕಲ್ಪನಾಥ ರಾಯ್‌ ಅವರಿಗೆ ವಿಶೇಷ ಟಾಡಾ ನ್ಯಾಯಾಲಯವು ಇಂದು ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಲಂಚ ಪ್ರಕರಣ: ಜೆಎಂಎಂ ಮಾಜಿ ಸಂಸದ ಶೈಲೇಂದ್ರ ಮಹತೊ ತಪ್ಪೊಪ್ಪಿಗೆ
ನವದೆಹಲಿ, ಮಾ. 17 (ಯುಎನ್‌ಐ, ಪಿಟಿಐ)–
ಜೆಂಎಂಎಂ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಶೈಲೇಂದ್ರ ಮಹತೊ ಅವರು ನ್ಯಾಯಾಲಯದ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಪ್ರಕರಣ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅಜಿತ್‌ ಭಾರಿಹೋಕ್‌ ಅವರಿಗೆ ಹೇಳಿಕೆಯನ್ನು ಸಲ್ಲಿಸಲಾಗಿದೆ. ಹೇಳಿಕೆಯನ್ನು ನಾಳೆ ಪರಿಶೀಲಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ವಿರುದ್ಧ 1993ರ ಜುಲೈ 28 ರಂದು ಮಂಡಿಸಲಾದ ಅವಿಶ್ವಾಸ ಗೊತ್ತುವಳಿಯ ವಿರುದ್ಧ ಮತ ಹಾಕಲು ತಾವು 50 ಲಕ್ಷ ರೂಪಾಯಿ ಲಂಚ ಪಡೆದಿದ್ದಾಗಿ ಮಹತೊ ಒಪ್ಪಿಕೊಂಡಿದ್ದಾರೆ.

ADVERTISEMENT

ಕೋಲಾರ: ಚಿನ್ನ ಕದಿಯುವಜಾಲ ಬೆಳಕಿಗೆ
ನವದೆಹಲಿ, ಮಾ. 17–
ಕೋಲಾರದ ಚಿನ್ನದ ಗಣಿಯಿಂದಉತ್ಪನ್ನವಾಗುವ ಚಿನ್ನವನ್ನು ಕದ್ದೊಯ್ದು ಅಕ್ರಮ ವ್ಯವಹಾರ ನಡೆಸುತ್ತಿರುವ ಜಾಲದ ಕೆಲವು ರಹಸ್ಯ ಗೊತ್ತಾಗಿರುವುದರಿಂದ, ಈ ಅಕ್ರಮ ದಂಧೆಯನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಉದ್ಯಮಗಳ ಸಂಸತ್‌ ಸ್ಥಾಯಿ ಸಮಿತಿಯ ಉಪಸಮಿತಿಯು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಈ ಉಪಸಮಿತಿಯು ಸಾರ್ವಜನಿಕ ಉದ್ಯಮಗಳ ಸ್ಥಿತಿಗತಿಗಳ ಬಗೆಗೆ ಅಧ್ಯಯನ ಪ್ರವಾಸ ಮಾಡಿ ಸಿದ್ಧಪಡಿಸಿರುವ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು.

ಈ ವರದಿಯ ಪ್ರಕಾರ ಕೋಲಾರದಂತಹ ಒಂದು ಸಣ್ಣ ಪಟ್ಟಣದಲ್ಲಿ ಐದು ಸಾವಿರ ಮಂದಿ ಚಿನ್ನದ ಒಡವೆಗಳ ಕಾಯಕದಲ್ಲಿ ತೊಡಗಿರುವುದು ಮತ್ತು ಒಡವೆಗಳ ಐದನೂರು ಷೋ ರೂಂಗಳು ಇರುವುದು ಇಲ್ಲಿ ಅಕ್ರಮ ದಂಧೆ ನಡೆಯುತ್ತಿರುವ ಸುಳಿವನ್ನು ಸ್ಪಷ್ಟವಾಗಿ ನೀಡುತ್ತದೆ ಎಂದು ಕೆಜಿಎಫ್‌ ಚಿನ್ನದ ಗಣಿಯಲ್ಲಿನ ವ್ಯವಹಾರದ ಬಗೆಗೆ ಶಂಕೆ ವ್ಯಕ್ತಪಡಿಸಿದೆ.

‘ಧರ್ಮಕಾರಣ’ ಲೇಖಕರಿಂದ ಅಕಾಡೆಮಿ ಪ್ರಶಸ್ತಿ ತಿರಸ್ಕಾರ
ಬೆಂಗಳೂರು, ಮಾ. 17–
ಇತ್ತೀಚಿನ ದಿನಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ತಮ್ಮ ಕಾದಂಬರಿ ‘ಧರ್ಮಕಾರಣ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಘೋಷಿಸಿರುವ ಬಹುಮಾನವನ್ನು ತಿರಸ್ಕರಿಸಲು ನಿರ್ಧರಿಸಿರುವುದಾಗಿ ಲೇಖಕ ಡಾ. ಪಿ.ವಿ.ನಾರಾಯಣ ಸ್ಪಷ್ಟಪಡಿಸಿದ್ದಾರೆ.

‘ಬಿಟ್ಟುಕೊಡುತ್ತಿರುವುದು ಬಹುಮಾನವನ್ನೇ ವಿನಾ ಅಭಿಪ್ರಾಯವನ್ನಲ್ಲ’ ಎಂದು ಅಕಾಡೆಮಿ ಅಧ್ಯಕ್ಷರಿಗೆ ಬರೆದು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.