ಅರ್ಜುನನ್ ಸಾವು: ನ್ಯಾಯಾಂಗ ತನಿಖೆಗೆ ರಾಜ್ಯ ಸಂಪುಟ ನಿರ್ಧಾರ
ಬೆಂಗಳೂರು, ಸೆ. 30– ಅರ್ಜುನನ್ ಸೇರಿದಂತೆ ಕಾಡುಗಳ್ಳ ವೀರಪ್ಪನ್ ಸಹಚರರ ನಿಗೂಢ ಸಾವಿನ ನ್ಯಾಯಾಂಗ ತನಿಖೆ, ಗ್ರಾಮೀಣ ನಿರುದ್ಯೋಗಿಗಳಿಗೆ 15 ಕೃಪಾಂಕ ನೀಡಿಕೆ, ವಿಧಾನಸಭೆ– ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡ 25 ಮೀಸಲಾತಿಗಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಕೋರಿಕೆ– ಇವು ಇಂದು ಸೇರಿದ್ದ ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡ ಪ್ರಮುಖ ತೀರ್ಮಾನಗಳಾಗಿವೆ.
ಸಂಪುಟದ ಈ ತೀರ್ಮಾನಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಂ.ಪಿ.ಪ್ರಕಾಶ್, ‘ವೀರಪ್ಪನ್ ಹಿಡಿಯುವುದಕ್ಕೆಂದು ಶಂಕರ್ ಬಿದರಿ ನೇತೃತ್ವದಲ್ಲಿ ರಚನೆಯಾಗಿರುವ ಕಾರ್ಯಾಚರಣೆ ದಳದ ಕಾರ್ಯಕ್ಷಮತೆ, ದಕ್ಷತೆಯನ್ನು ಸಂಪುಟ ಮೆಚ್ಚಿ ಪ್ರಶಂಸಿಸಿತು’ ಎಂದು ಹೇಳಿದರು.
ಗುಜರಾತ್: ವಾರದಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ
ಗಾಂಧಿನಗರ, ಸೆ. 30 (ಪಿಟಿಐ)– ಬಿಜೆಪಿಯೊಳಗಿನ ಬಿಕ್ಕಟ್ಟಿನಿಂದ ಅತಂತ್ರ ಸ್ಥಿತಿಯಲ್ಲಿರುವ ಗುಜರಾತ್ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರು ವಾರದ ಒಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ನರೇಶ್ ಚಂದ್ರ ಅವರು ಇಂದು ಸೂಚಿಸಿದರು.
ಅಕ್ಟೋಬರ್ ಏಳರೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರನ್ನು ಭೇಟಿಯಾದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸುರೇಶ್ ಮೆಹ್ತಾ ಅವರಿಗೆ ರಾಜ್ಯಪಾಲರು ತಿಳಿಸಿದರು. ವಿಧಾನಸಭೆ ಅಧಿವೇಶನದ ದಿನಾಂಕ ನಿರ್ಧರಿಸಲು ಸಚಿವ ಸಂಪುಟ ಸಭೆ ಕೂಡಲೇ ಸೇರಲಿದೆ ಎಂದು ಮೆಹ್ತಾ ಅವರು ನಂತರ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.