l ಗುಜ್ರಾಲ್ ಸರ್ಕಾರ: ಕಾಂಗ್ರೆಸ್ ಅತೃಪ್ತಿ
ನವದೆಹಲಿ ಜುಲೈ 12 (ಪಿಟಿಐ)– ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರ್ಕಾರದ ಆಡಳಿತ ವೈಖರಿ ಕುರಿತು ಕಾಂಗ್ರೆಸ್ ಇದೇ ಪ್ರಥಮ ಬಾರಿಗೆ ಅತೃಪ್ತಿ ವ್ಯಕ್ತಪಡಿಸಿದೆ. ಆದರೂ ಗುಜ್ರಾಲ್ ಸರ್ಕಾರಕ್ಕೆ ಹೊರಗಿನಿಂದ ನೀಡುತ್ತಿರುವ ಬೆಂಬಲವನ್ನು ಈ ಕಾರಣಕ್ಕೆ ವಾಪಸ್ ಪಡೆಯುವುದಿಲ್ಲ ಎಂದು ಇಂದು ನಡೆಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಕಾರ್ಯಕಾರಿ ಸಭೆಯನ್ನು ಇಂದು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಸೀತಾರಾಂ ಕೇಸರಿ ಅವರು, ಗುಜ್ರಾಲ್ ನೇತೃತ್ವದ ಸರ್ಕಾರಕ್ಕೆ ‘ದೌರ್ಬಲ್ಯ’ಗಳಿವೆ; ಆದರೂ ಬೆಂಬಲವನ್ನು ಕಾಂಗ್ರೆಸ್ ಮುಂದುವರಿಸುವುದು ಎಂದರು.
ಸಂಸತ್ನ ಮುಂಗಾರು ಅಧಿವೇಶನ ಪ್ರಾರಂಭವಾಗಲು ಇನ್ನು ಕೇವಲ 10 ದಿನಗಳಿರುವಾಗ ಕಾಂಗ್ರೆಸ್ ತನ್ನ ಅತೃಪ್ತಿ ವ್ಯಕ್ತ ಪಡಿಸಿರುವುದು ಮುಖ್ಯ ಬೆಳವಣಿಗೆಯಾಗಿದೆ.
l ಆಲಮಟ್ಟಿ ಹಿನ್ನೀರು: ಸಜ್ಜಾಗಲು ಸೇನೆಗೆ ಸೂಚನೆ
ವಿಜಾಪುರ, ಜುಲೈ 12– ಕಳೆದ ಎರಡು ವಾರಗಳಿಂದ ಒಂದೇ ಸಮನೆ ಏರುತ್ತಿರುವ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದಾಗಿ ಉಲ್ಬಣಿಸಬಹುದಾದ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ವಾಯುಸೇನೆ ಮತ್ತು ಭೂಸೇನೆಗೆ ಸೂಚನೆ ನೀಡಲಾಗಿದೆ. ಆಲಮಟ್ಟಿ, ಬೀಳಗಿ, ಬಾಗಲಕೋಟೆಗಳಲ್ಲಿ ಹೆಲಿಪ್ಯಾಡ್ಗಳನ್ನು ಸಿದ್ಧಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.