ADVERTISEMENT

27.12.1994 ಮಂಗಳವಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 20:23 IST
Last Updated 26 ಡಿಸೆಂಬರ್ 2019, 20:23 IST

ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಡಿ. 26– ರಾಜ್ಯದ ಹತ್ತನೇ ವಿಧಾನಸಭಾ ಸದಸ್ಯರಾಗಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಹಾಗೂ ಅವರ ಮಂತ್ರಿಮಂಡಲದ ಎಲ್ಲ ಸದಸ್ಯರು, ಮಾಜಿ ಮುಖ್ಯಮಂತ್ರಿಗಳಾದ ಎಸ್‌. ಬಂಗಾರಪ್ಪ ಹಾಗೂ ಎಂ. ವೀರಪ್ಪ ಮೊಯಿಲಿ ಸೇರಿದಂತೆ 213 ಮಂದಿ ಇಂದು ಹಂಗಾಮಿ ವಿಧಾನಸಭಾಧ್ಯಕ್ಷ ಧರ್ಮಸಿಂಗ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ಏಳನೇ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಮೊದಲನೆಯವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

ಸ್ಪೀಕರ್ ಆಗಿ ರಮೇಶ್ ಕುಮಾರ್ ಆಯ್ಕೆ ಖಚಿತ

ಬೆಂಗಳೂರು, ಡಿ. 26– ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಆಡಳಿತಾರೂಢ ಜನತಾ ದಳದ ಸದಸ್ಯ ರಮೇಶ್ ಕುಮಾರ್ ಅವರು ನಾಳೆ ವಿಧಾನಸಭೆಯ ಹದಿಮೂರನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕುಮಾರ್ ಹೆಸರು ಸೂಚಿಸಿ ಜನತಾದಳ ಎರಡು ಪ್ರಸ್ತಾವಗಳನ್ನು ಸಲ್ಲಿಸಿದೆ. ಒಂದನೇ ಪ್ರಸ್ತಾವದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರ ಹೆಸರು ಸೂಚಿಸಿದ್ದು, ಉಪ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅನುಮೋದಿಸಿದ್ದಾರೆ. ಎರಡನೇ ಪ್ರಸ್ತಾವದಲ್ಲಿ ಕಂದಾಯ ಸಚಿವ ಆರ್‌.ಎಲ್‌. ಜಾಲಪ್ಪ ಅವರ ಹೆಸರು ಸೂಚಿಸಿದ್ದು, ಹಣಕಾಸು ಸಚಿವ ಸಿದ್ದರಾಮಯ್ಯ ಅನುಮೋದಿಸಿದ್ದಾರೆ.

ಕರಾಚಿ: ಭಾರತದ ಕಾನ್ಸುಲೇಟ್ ಕಚೇರಿ ಮುಚ್ಚಲು ಪಾಕ್ ಸೂಚನೆ

ಇಸ್ಲಾಮಾಬಾದ್‌, ಡಿ. 26, (ಪಿಟಿಐ)– ಕರಾಚಿಯಲ್ಲಿನ ಭಾರತೀಯ ಕಾನ್ಸುಲೇಟ್ ಕಚೇರಿಯನ್ನು ಈ ಕೂಡಲೇ ಮುಚ್ಚುವಂತೆ ಪಾಕಿಸ್ತಾನದ ಸರ್ಕಾರ ಇಂದು ಭಾರತಕ್ಕೆ ಸೂಚಿಸಿದೆ. ಪಾಕಿಸ್ತಾನದ ಈ ಕ್ರಮವನ್ನು ತೀವ್ರವಾಗಿ ಪ್ರತಿಭಟಿಸಿರುವ ಭಾರತವು ಇದು ತೀರಾ ಅನಗತ್ಯ ಹಾಗೂ ಅನಪೇಕ್ಷಿತ ಹೆಜ್ಜೆ ಎಂದು ಬಣ್ಣಿಸಿದೆ.

‘ಕರಾಚಿಯಲ್ಲಿನ ಕಾನ್ಸುಲೇಟ್ ಕಚೇರಿ ಮುಚ್ಚುವಂತೆ ಒತ್ತಾಯಿಸುವ ಅಧಿಕಾರ ಚಲಾಯಿಸದೆ ಪಾಕಿಸ್ತಾನಕ್ಕೆ ಬೇರೆ ದಾರಿಯೇ ಇಲ್ಲ. ಪಾಕಿಸ್ತಾನದ ಒಳಗೆ ಭಯೋತ್ಪಾದನೆ, ಭಯೋತ್ಪಾದಕ ಚಟುವಟಿಕೆಯ ಕೇಂದ್ರವೊಂದು ಕಾರ್ಯ ನಿರ್ವಹಿಸಲು ನಾವು ಬಿಡುವುದಿಲ್ಲ’ ಎಂದು ಪಾಕ್ ವಿದೇಶಾಂಗ ಕಾರ್ಯದರ್ಶಿ ನಜ್ಮುದ್ದೀನ್ ಶೇಖ್ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.