ಕಡೆಗೂ ಅದ್ದೂರಿ ಜಂಬೂ ಸವಾರಿ: ಲಕ್ಷಾಂತರ ಜನರ ವೀಕ್ಷಣೆ
ಮೈಸೂರು, ಅ. 1– ಕಡೇ ಗಳಿಗೆಯ ಅಡಚಣೆಗಳ ನಡುವೆಯೂ ದಸರಾ ಜಂಬೂ ಸವಾರಿ ಇಂದು ಮಧ್ಯಾಹ್ನ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾಯಿತು. ನಂತರ ಸುಸೂತ್ರವಾಗಿ ನಡೆಯಿತು.
ಆನೆ ‘ಬಲರಾಮ’ನ ಮೇಲೆ ಚಿನ್ನದ ಅಂಬಾರಿಯನ್ನು ಕಟ್ಟಲು ಬೇಕಾದ ಹಗ್ಗವನ್ನು ಕೊಡಲು ಕಡೇ ಗಳಿಗೆಯವರೆಗೂ ಸತಾಯಿಸಿದ ಅರಮನೆ ಸಿಬ್ಬಂದಿ, ಅಂಬಾರಿಯನ್ನು ಸರಿಯಾಗಿ ಕಟ್ಟಲಾಗದೆ, ಎರಡನೆಯ ಬಾರಿ ಅದರ ಸಿದ್ಧತೆ ಮೊದಲಾದ ಅಡಚಣೆಗಳು ಎದುರಾದುವು.
ಬೆಳಿಗ್ಗೆಯೇ ಮೈಸೂರಿನಲ್ಲಿ ಹಬ್ಬದ ಸಡಗರ. ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ವಿಜಯದಶಮಿಯ ದಿನವಾದ ಇಂದು ವಿಧ್ಯುಕ್ತವಾಗಿ ಜಂಬೂಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೋಣಿ ಮುಳುಗಿ ರಾಜ್ಯದ 16 ಯಾತ್ರಿಗಳ ಸಾವು
ನವದೆಹಲಿ, ಅ. 1– ಉತ್ತರ ಭಾರತದ ಪ್ರವಾಸಕ್ಕೆ ಬಂದಿದ್ದ ಕರ್ನಾಟಕದ 36 ಮಂದಿ ಯಾತ್ರಾರ್ಥಿಗಳಿದ್ದ ದೋಣಿಯೊಂದು ಬುಧವಾರ ಬೆಳಿಗ್ಗೆ ವಾರಾಣಸಿಯ ಗಂಗಾ ನಂದಿಯಲ್ಲಿ ಮುಳುಗಿದ ದುರಂತದಲ್ಲಿ 16 ಮಂದಿ ಸತ್ತಿರುವುದಾಗಿ ಶಂಕಿಸಲಾಗಿದೆ.
ಇದುವರೆಗೆ ಏಳು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇನ್ನೂ ಒಂಬತ್ತು ಮಂದಿ ಕಣ್ಮರೆಯಾಗಿದ್ದು ಅವರ ಮೃತ ದೇಹಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.
ಸತ್ತಿರುವವರಲ್ಲಿ ಬೆಂಗಳೂರಿನ ಸಂಜಯನಗರ, ಜಯನಗರ ಮತ್ತು ಹುಬ್ಬಳ್ಳಿಯ ಅರವಿಂದ ನಗರ ಕಾರ್ಪೋರೇಷನ್ ಬ್ಯಾಂಕಿನ ಸಿಬ್ಬಂದಿ ಮತ್ತು ಕುಟುಂಬಕ್ಕೆ ಸೇರಿದವರು ಎಂದು ವಾರಾಣಸಿಯ ಜಿಲ್ಲಾಧಿಕಾರಿ ಎ.ಕೆ. ಅವಸ್ಥಿ ಅವರು ತಮ್ಮನ್ನು ಇಲ್ಲಿಂದ ಸಂಪರ್ಕಿಸಿದ ‘ಪ್ರಜಾವಾಣಿ’ಗೆ ವಿವರ ನೀಡಿದರು.
ಬೆಳಿಗ್ಗೆ 10.45ರಲ್ಲಿ ಗಂಗಾ ನದಿಯ ಶಿರಾಲ ಘಾಟ್ ಬಳಿ ದೋಣಿ ಹೋಗುವಾಗ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ರಭಸ ಹೆಚ್ಚಾಗಿ ಸೇತುವೆಯ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ಮುಳುಗಿತು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.