ಹುಬ್ಬಳ್ಳಿ, ಜೂನ್ 10– ಹುಬ್ಬಳ್ಳಿಯಿಂದ ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೇಟಿಂಗ್ ಮೂಲಕ ಕ್ರಮಿಸಿ ದಾಖಲೆ ನಿರ್ಮಾಣ ಮಾಡಿರುವ ಹುಬ್ಬಳ್ಳಿಯ ಅಂಧ ಬಾಲಕ ನಾನೂ ಸಹದೇವ ಪಾಟೀಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಲ್ ಟಿಕೆಟ್ ತಪ್ಪಿನಿಂದ ಸಮಸ್ಯೆಯಾಗಿದ್ದ ವಿಷಯಗಳಲ್ಲಿ ಅತ್ಯಂತ ಹೆಚ್ಚಿನ ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು ಎಐಎಸ್ ಮಾಡುವ ಹೆಬ್ಬಯಕೆ ಹೊಂದಿದ್ದಾನೆ.
‘ಎಲ್ಲರೂ ಐಎಎಸ್ ಮಾಡ್ತಾರೆ ಅಂತ ನಾನೂ ಮಾಡಂಗಿಲ್ರೀ. ಅಂಧರು ಯಾರೂ ಈವರೆಗೆ ಐಎಎಸ್ ಮಾಡಿಲ್ಲ. ಅದಕ್ಕೆ ಐಎಎಸ್ ಮಾಡಿ ಸಾಧನೆ ಮಾಡ್ಬೇಕೂ ಅಂತಿದ್ದೀನಿ’– ‘ಪ್ರಜಾವಾಣಿ’ ಪ್ರಶ್ನೆಗೆ ನಾನೂ ಪಾಟೀಲ ನೀಡಿದ ಉತ್ತರವಿದು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಮುಳುವು?
ಬೆಂಗಳೂರು, ಜೂನ್ 10– ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವೇಳೆ ಬದಲಾವಣೆಯಿಂದ ಅನೇಕ ಗ್ರಾಮೀಣ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಬಾಲಕಿಯರು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡಬೇಕಾಗಬಹುದೇ?
ಪ್ರಸ್ತುತ ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಈ ಸಾಧ್ಯತೆ ಕಂಡುಬರುತ್ತಿದೆ. ಶಾಲೆಗಳ ವೇಳೆಯನ್ನು ಬೆಳಿಗ್ಗೆ 11ಕ್ಕೆ ಬದಲಾಗಿ 9.30ಕ್ಕೆ ನಿಗದಿ ಪಡಿಸಿರುವುದರಿಂದ ಹಳ್ಳಿಗಾಡಿನ ಅನೇಕ ವಿದ್ಯಾರ್ಥಿಗಳಿಗೆ ಶಾಲೆಗೆ ಬರುವುದು ಕಷ್ಟವಾಗಬಹುದು ಎಂಬ ಅನಿಸಿಕೆ ವ್ಯಕ್ತವಾಗುತ್ತಿದೆ.
ಹಳ್ಳಿಗಾಡಿನಲ್ಲಿ ಬದುಕು ಕೃಷಿ ಆಧಾರಿತವಾಗಿರುವುದರಿಂದ ಬಹುತೇಕ ಕೃಷಿಕರ ಮತ್ತು ಕೃಷಿ ಕಾರ್ಮಿಕರ ಮಕ್ಕಳು ನಗರ ಪ್ರದೇಶಗಳ ವಿದ್ಯಾರ್ಥಿಗಳಂತೆ ಬೆಳಿಗ್ಗೆ ಎದ್ದು ನೇರವಾಗಿ ಶಾಲೆಗೆ ಬರುವುದು ಸಾಧ್ಯವಿಲ್ಲ.
ಮನೆಗೆಲದಲ್ಲಿ ಕನಿಷ್ಠ ಸಹಾಯ ಹಸ್ತವನ್ನು ಚಾಚಿದ ನಂತರವೇ ಈ ಮಕ್ಕಳಿಗೆ ಸ್ಲೇಟು, ಬಳಪ– ಪುಸ್ತಕದ ಚೀಲವನ್ನು ಹೆಗಲಿಗೇರಿಸಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.