ಆ.15ರೊಳಗೆ ಗಡಿ ವಿವಾದ ಅಂತ್ಯಕ್ಕೆ ತೀರ್ಮಾನ
ಮುಂಬೈ, ನ. 25 (ಪಿಟಿಐ, ಯುಎನ್ಐ)– ಕಳೆದ ನಾಲ್ಕು ದಶಕಗಳಷ್ಟು ಹಳೆಯದಾದ ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಾಗಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಇಂದು ಘೋಷಿಸಿದರು.
ಮುಂಬರುವ ಆಗಸ್ಟ್ 15ರೊಳಗಾಗಿ ಗಡಿ ವಿವಾದಕ್ಕೆ ಅಂತಿಮ ತೆರೆ ಎಳೆಯುವ ಇಂಗಿತವನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಮನೋಹರ್ ಜೋಷಿ ಅವರು ವ್ಯಕ್ತಪಡಿಸಿದರು. ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ದೇಶದಲ್ಲಿನ ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು.
ಜೈನ್ ಆಯೋಗದ ವರದಿ ಪುನರ್ಪರಿಶೀಲನಾ ಸಮಿತಿಗೆ ಸಲಹೆ: ಕಾಂಗ್ರೆಸ್ನಿಂದ ಸಂಧಾನ ಸೂತ್ರ
ನವದೆಹಲಿ, ನ. 25– ನ್ಯಾಯಮೂರ್ತಿ ಎಂ.ಸಿ.ಜೈನ್ ಆಯೋಗದ ಮಧ್ಯಂತರ ವರದಿಯನ್ನು ಪುನರ್ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿಯೊಂದನ್ನು ರಚಿಸಬೇಕು, ಇದು ತನ್ನ ವರದಿಯನ್ನು ನೀಡಿ ಅದರಲ್ಲಿ ಡಿಎಂಕೆಯನ್ನು ಆರೋಪದಿಂದ ಮುಕ್ತ ಮಾಡುವವರೆವಿಗೆ ಆ ಪಕ್ಷದ ಸಚಿವರನ್ನು ಸಂಪುಟದಿಂದ ದೂರವಿಡಬೇಕು ಎಂಬ ಸಂಧಾನ ಸೂತ್ರವನ್ನು ಸರ್ಕಾರದ ಮುಂದಿಡಲು ಕಾಂಗ್ರೆಸ್ ಹೆಚ್ಚೂಕಡಿಮೆ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.