ADVERTISEMENT

25 ವರ್ಷಗಳ ಹಿಂದೆ| ಸೋಮವಾರ 30.9.1996

25 ವರ್ಷಗಳ ಹಿಂದೆ ಸೋಮವಾರ 30.9.1996

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 19:30 IST
Last Updated 29 ಸೆಪ್ಟೆಂಬರ್ 2021, 19:30 IST
   

ವಂಚನೆ ಹಗರಣ: ಕೋರ್ಟಿಗೆ ಇಂದು ರಾವ್ ಖುದ್ದು ಹಾಜರಿ

ನವದೆಹಲಿ, ಸೆ. 29 (ಪಿಟಿಐ)– ಲಕ್ಕೂಭಾಯಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ನಾಳೆ ಇಲ್ಲಿನ ತೀಸ್ ಹಜಾರಿ ನ್ಯಾಯಾಲಯಕ್ಕೆ ಹಾಜರಾಗಬೇಕಾ ಗಿದ್ದು ಇದಕ್ಕಾಗಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಕ್ರಿಮಿನಲ್ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಯೊಬ್ಬರು ನ್ಯಾಯಾಲಯಕ್ಕೆ ಹಾಜರಾಗುತ್ತಿರುವುದು ಇದೇ ಮೊದಲನೇ ಬಾರಿ. ರಾವ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಈಗಾಗಲೇ ನ್ಯಾಯಾಲಯದಿಂದ ತಿರಸ್ಕೃತವಾಗಿರುವುದರಿಂದ ನಾಳೆ ಅವರು ನ್ಯಾಯಾಲಯಕ್ಕೆ ಹಾಜರಾದ ತಕ್ಷಣ ಅವರನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವ ಸಾಧ್ಯತೆ ಇದೆ.

ADVERTISEMENT

ಆರ್ಥಿಕವಾಗಿ ಮುಂದುವರಿದವರಿಗೆ ನವೆಂಬರ್‌ನಿಂದ ರೇಷನ್ ಇಲ್ಲ

ನವದೆಹಲಿ, ಸೆ. 29 (ಯುಎನ್ಐ)– ಬರುವ ನವೆಂಬರ್ ತಿಂಗಳಿಂದ ಸಮಾಜದ ಕೆನೆ ಪದರಿನಲ್ಲಿರುವವರಿಗೆ (ಆರ್ಥಿಕವಾಗಿ ಮುಂದುವರಿದಿರುವ) ಸಾರ್ವಜನಿಕ ಪಡಿತರ ಸೌಲಭ್ಯವನ್ನು ರದ್ದುಪಡಿಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಪಿ.ಯಾದವ್ ಹೇಳಿದ್ದಾರೆ.

‘ಸಾರ್ವಜನಿಕ ಪಡಿತರ ವ್ಯವಸ್ಥೆ ಬಡತನ ರೇಖೆಗಿಂತ ಕೆಳಗಿರುವವರ ಅನುಕೂಲಕ್ಕಾಗಿ ರೂಪಿಸಿದ್ದು’ ಎಂದ ಅವರು, ‘ಆರ್ಥಿಕವಾಗಿ ಸಬಲರಾಗಿರುವವರಿಗೆ ಪಡಿತರ ಸೌಲಭ್ಯವನ್ನು ಗಾಂಧೀ ಜಯಂತಿಯ ದಿನವಾದ ಅ.2ರಿಂದ ರದ್ದುಪಡಿಸಬೇಕಾಗಿತ್ತು. ಉತ್ತರಪ್ರದೇಶ ಹಾಗೂ ಜಮ್ಮು– ಕಾಶ್ಮೀರ ಚುನಾವಣೆಯ ಕಾರಣ ಜಾರಿ ದಿನವನ್ನು ನವೆಂಬರ್‌ಗೆ ಮುಂದೂಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.