ಕಾಶ್ಮೀರ ಉಗ್ರರ ಶರಣಾಗತಿಗೆ ಗಡುವು
ಶ್ರೀನಗರ, ಅ. 19 (ಯುಎನ್ಐ)– ‘ರಾಜ್ಯದಲ್ಲಿರುವ ಎಲ್ಲ ಉಗ್ರಗಾಮಿಗಳು 30 ದಿನಗಳಲ್ಲಿ ಸರ್ಕಾರಕ್ಕೆ ಶರಣಾಗಬೇಕು. ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕಾದೀತು’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಇಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರು, ಮೇಲ್ಮನೆ ಸದಸ್ಯರು ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳ ಮುಂದೆ ಉಗ್ರಗಾಮಿಗಳು ಶರಣಾಗಬಹುದು’ ಎಂದರು.
ಸೌಂದರ್ಯ ಸ್ಪರ್ಧೆ ‘ಕ್ಷುಲ್ಲಕ’, ಪ್ರತಿಭಟನೆ ಸಲ್ಲ
ಬೆಂಗಳೂರು, ಅ. 19– ‘ಮಹಿಳೆಯರನ್ನು ಕಾಡುತ್ತಿರುವ ಸಾವಿರಾರು ಜ್ವಲಂತ ಸಮಸ್ಯೆಗಳಿರುವಾಗ ವಿಶ್ವ ಸುಂದರಿ ಸ್ಪರ್ಧೆಯಂತಹ ಕ್ಷುಲ್ಲಕ ವಿಷಯಕ್ಕೆ ಪ್ರತಿಭಟಿಸುವುದು ಸರಿಯಲ್ಲ...’
ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದವರು ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಮಹಿಳೆಯರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಂದು ಭಾರತೀಯ ವಿದ್ಯಾಭವನ
ದಲ್ಲಿ ಏರ್ಪಡಿಸಿದ್ದ ‘ಸೌಂದರ್ಯ ಸ್ಪರ್ಧೆ ಮಹಿಳೆಯರ ಘನತೆಗೆ ಚ್ಯುತಿ ತರುವುದೇ?’ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಅರುಂಧತಿ ನಾಗ್, ಮಾಜಿ ಭಾರತ ಸುಂದರಿ ರೇಖಾ ಹಂದೆ, ವೀಣಾ ಕಲಾವಿದೆ ಸುಮಾ ಸುಧೀಂದ್ರ, ///ಶ್ರೇಷ್ಲ ಪ್ರಸೂತಿ ತಜ್ಞೆ ಡಾ. ಕಾಮಿನಿರಾವ್, ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಹಾಗೂ ವಿದ್ಯಾರ್ಥಿನಿ ನಾಯಕಿ ಉಮಾ ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವಸುಂದರಿ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.
‘ಒಲಿಂಪಿಕ್ಸ್ನಲ್ಲಿ ಅತ್ಯಂತ ಕಡಿಮೆ ಉಡುಪು ಧರಿಸಿ ಆಡುವವರನ್ನು ನಾವು ವಿರೋಧಿಸುವುದಿಲ್ಲ. ಜಿಮ್ನಾಸ್ಟಿಕ್ಸ್ನಲ್ಲಿ ದೇಹಕ್ಕಂಟಿದ ಉಡುಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಸೌಂದರ್ಯ ಸ್ಪರ್ಧೆಯಲ್ಲಿ ಈಜುಡುಗೆ ಧರಿಸಿದರೆ ಪ್ರತಿಭಟಿಸುತ್ತೇವೆ. ಅದನ್ನು ಅಶ್ಲೀಲ ಎನ್ನುತ್ತೇವೆ. ಈಜುವಾಗ ಈಜುಡುಗೆ ಧರಿಸದೆ, ಸೀರೆ ಉಡಲು ಸಾಧ್ಯವೇ?’ ಎಂದು ಮಾಜಿ ಭಾರತ ಸುಂದರಿ ರೇಖಾ ಹಂದೆ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.