ಸಮಾನ ನಾಗರಿಕ ಸಂಹಿತೆ ಜಾರಿ ಸುಪ್ರೀಂ ಕೋರ್ಟ್ ಸೂಚನೆ
ನವದೆಹಲಿ, ಮೇ 10 (ಪಿಟಿಐ, ಯುಎನ್ಐ)– ದೇಶದ ಎಲ್ಲ ಪ್ರಜೆಗಳಿಗೆ ಅನ್ವಯಿಸುವ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪೊಂದರಲ್ಲಿ ಕೇಂದ್ರಕ್ಕೆ ಸೂಚಿಸಿತು.
‘ಸಂವಿಧಾನದ 44ನೇ ವಿಧಿಯ ಪ್ರಕಾರ, ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ತಮ್ಮ ಕರ್ತವ್ಯವನ್ನು
ಪಾಲಿಸುವಲ್ಲಿ ಇದುವರೆಗಿನ ಎಲ್ಲ ಸರ್ಕಾರಗಳು ಅಸಡ್ಡೆ ತೋರಿವೆ. ಆದ್ದರಿಂದ ಈ ವಿಷಯದಲ್ಲಿ ಗಮನಹರಿಸುವಂತೆ
ನಾವು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ನ್ಯಾಯಮೂರ್ತಿ ಕುಲದೀಪ್ ಸಿಂಗ್ ಮತ್ತು ಆರ್.ಎಂ.ಸಹಾಯ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ರಾಗಿ, ಜೋಳ ಪಡಿತರ ವಿತರಣೆಗೆ ನಕಾರ
ಬೆಂಗಳೂರು, ಮೇ 10– ಪಡಿತರ ಚೀಟಿಗಳ ಮೂಲಕ ಜೋಳ ಮತ್ತು ರಾಗಿಯನ್ನೂ ಸುಲಭ ಬೆಲೆಯಲ್ಲಿ ವಿತರಣೆ ಮಾಡಬೇಕೆಂಬ ಸಲಹೆ ಕಾರ್ಯಸಾಧುವಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಖಾತೆ ಸಚಿವ ಎಸ್.ನಂಜಪ್ಪ ಇಂದು ಸ್ಪಷ್ಟಪಡಿಸಿದರು.
ಅಕ್ಕಿಯನ್ನು ಗಿರಣಿ ಹಂತದಲ್ಲಿಯೇ ಲೆವಿ ನೀತಿಯನ್ವಯ ಸಂಗ್ರಹಿಸಲು ಅವಕಾಶ ಇದೆ. ಆದರೆ ಜೋಳ ಮತ್ತು ರಾಗಿಯನ್ನು ಈ ರೀತಿಯಲ್ಲಿ ಸಂಗ್ರಹಿಸಲು ಅವಕಾಶ ಇಲ್ಲದ್ದರಿಂದ ಈ ತೀರ್ಮಾನಕ್ಕೆ ಬರಲಾಯಿತು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.