ADVERTISEMENT

25 ವರ್ಷಗಳ ಹಿಂದೆ: ಶನಿವಾರ ಮಾರ್ಚ್‌ 16, 1996

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:30 IST
Last Updated 15 ಮಾರ್ಚ್ 2021, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಗ್ರಾಮೀಣ ಅಭ್ಯರ್ಥಿಗೆ 50 ಕೃಪಾಂಕ ನೀಡಲು ನಿರ್ಧಾರ

ಬೆಂಗಳೂರು, ಮಾರ್ಚ್‌ 15– ಸಿಂಕೋನಾ, ಕಾಫಿ, ಟೀ, ರಬ್ಬರ್‌ ತೋಟಗಳ ಕಾರ್ಮಿಕರಿಗೆ ತುಟ್ಟಿಭತ್ಯೆ ಸೇರಿ ಕನಿಷ್ಠ ವೇತನ ದಿನಕ್ಕೆ 40 ರೂಪಾಯಿಗಳಿಗೆ ಹೆಚ್ಚಳ, ಸರ್ಕಾರಿ ಸೇವೆಯಲ್ಲಿದ್ದು ಮೃತಪಟ್ಟ ಕುಟುಂಬದಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ, ಸರ್ಕಾರಿ ಹುದ್ದೆಗಳಿಗೆ ಸಂದರ್ಶನಕ್ಕೆ ಬರುವ ಗ್ರಾಮೀಣ ಪ್ರದೇಶಗಳ ಅಭ್ಯರ್ಥಿಗಳಿಗೆ 50 ಕೃಪಾಂಕ, ಮೈಸೂರಿನಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆ, ಸಕಾಲದಲ್ಲಿ ಸಾಲ ತೀರಿಸುವ ರೈತರಿಗೆ ಪ್ರೋತ್ಸಾಹ ಸೇರಿದಂತೆ ಇನ್ನು ಕೆಲವು ಯೋಜನೆಗಳಿಗೆ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿತು.

ಕೈಗಾರಿಕೆ ಸರ್ವತೋಮುಖ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ನೂತನ ಕೈಗಾರಿಕಾ ನೀತಿಯನ್ನು ಅಂಗೀಕರಿಸಿತು.

ADVERTISEMENT

ಐಆರ್‌ಎಸ್‌– ಪಿ ಉಡಾವಣೆಗೆ ಎಲ್ಲ ಸಿದ್ಧತೆ

ಶ್ರೀಹರಿಕೋಟ, ಮಾರ್ಚ್‌ 15– ದೇಶದ ನಾಲ್ಕನೆಯ ದೂರಸಂವೇದಿ ಉಪಗ್ರಹ ಐಆರ್‌ಎಸ್‌–ಪಿ3 ಮತ್ತು ಸಂಪೂರ್ಣ ಸ್ವದೇಶಿ ನಿರ್ಮಿತ ಉಪಗ್ರಹ ವಾಹಕ ಐಎಸ್‌ಎಲ್‌ವಿ– ಡಿ3 ಈ ತಿಂಗಳ 18ರಂದು ಸೋಮವಾರ ಬೆಳಿಗ್ಗೆ 10.10ಕ್ಕೆ ಉಡಾವಣೆಯಾಗಲಿದ್ದು, ಆಂಧ್ರ ಪ್ರದೇಶದ ಪೂರ್ವ ಕರಾವಳಿಯಲ್ಲಿನ ಈ ಉಡ್ಡಯನ ತಾಣದಲ್ಲಿ ಇಂದು ‘ಅಂತಿಮ ಕಾಲಗಣನೆ’ ಮೊದಲಾಗಿದೆ.

ಉಡಾವಣಾ ಸಮಯಕ್ಕೆ 72 ಗಂಟೆಗಳ ಮುನ್ನ ಅಂತಿಮ ಗಣನೆ ಆರಂಭ. ಇಂದು ಬೆಳಿಗ್ಗೆ 9.23ರಿಂದ ಕಡೆಯ ಹಂತದ ಕೆಲಸ ಆರಂಭವಾಗಿದ್ದು, ರಾಕೆಟ್‌ಗೆ ಇಂಧನ ತುಂಬುವ ಕಾರ್ಯ ನಡೆಯುತ್ತಿದೆ. ಮೂರು ಹಂತಗಳ ‘ದಹನ– ಚಾಲನ’ ವ್ಯವಸ್ಥೆ ಇರುವ ಪಿಎಸ್‌ಎಲ್‌ವಿಯನ್ನು ಜೋಡಿಸಿ, ಅದರ ತುದಿಯಲ್ಲಿ ಉಪಗ್ರಹವನ್ನು ಕೂಡಿಸಿ ಉಡ್ಡಯನ ಸ್ತಂಭದಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.