ADVERTISEMENT

25 ವರ್ಷಗಳ ಹಿಂದೆ: ಅಕ್ಟೋಬರ್‌ 08-10-1996

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 15:16 IST
Last Updated 7 ಅಕ್ಟೋಬರ್ 2021, 15:16 IST
   

ಸಿಬಿಐ ನಿರ್ದೇಶಕರ ವರ್ತನೆಗೆ ಪಟ್ನಾ ಹೈಕೋರ್ಟ್‌ ತರಾಟೆ

ಪಟ್ನಾ, ಅ. 7(ಯುಎನ್‌ಐ, ಪಿಟಿಐ)– ಬಿಹಾರದ ಪಶುಸಂಗೋಪನ ಇಲಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿಗಳ ಮೇವು ಹಗರಣದ ತನಿಖೆಯಲ್ಲಿ ಸಿಬಿಐ ನಿರ್ದೇಶಕ ಜೋಗಿಂದರ್‌ ಸಿಂಗ್‌ ಅವರು ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಪಟ್ನಾ ಹೈಕೋರ್ಟ್ ಇಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸಿಬಿಐನ ಜಂಟಿ ನಿರ್ದೇಶಕ ಯು.ಎನ್‌. ಬಿಸ್ವಾಸ್ ಅವರು ನಡೆಸುತ್ತಿರುವ ಈ ಹಗರಣದ ತನಿಖೆಯಲ್ಲಿ ಜೋಗಿಂದರ್ ಸಿಂಗ್‌ ಅವರು ಒತ್ತಡ ತಂದು ತನಿಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬುದರ ಹಿನ್ನೆಲೆಯಲ್ಲಿ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿರುವ ಕೋರ್ಟ್, ‘ನಿರ್ದೇಶಕರು ತನಿಖೆಯಿಂದ ದೂರವಿರಬೇಕು. ಅಲ್ಲದೆ ತನಿಖಾ ತಂಡ ನಿರ್ದೇಶಕರ ಸಲಹೆ ಹಾಗೂ ನಿರ್ದೇಶನವಿಲ್ಲದೆ ತನಿಖೆ ನಡೆಸಬೇಕು’ ಎಂದು ಸೂಚಿಸಿದೆ.

ADVERTISEMENT

ಕೆ.ಆರ್‌.ಪೇಟೆ: ಪಟೇಲ್‌ ಸಭೆಯಲ್ಲಿ ಭಾರೀ ಗದ್ದಲ

ಮಂಡ್ಯ, ಅ. 7– ಜನತಾ ದಳದ ಅಭ್ಯರ್ಥಿ ಬಿ. ಜವರಾಯಿಗೌಡರ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಮುಖ್ಯಮಂತ್ರಿ ಜೆ.ಎಚ್‌.ಪಟೇಲರ ಭಾಷಣಕ್ಕೆ ಗದ್ದಲ, ಕೂಗಾಟದ ಮೂಲಕ ದಳದ ಕಾರ್ಯಕರ್ತರೇ ಅಡ್ಡಿಪಡಿಸಿದ ಘಟನೆ ಕೃಷ್ಣರಾಜಪೇಟೆಯಲ್ಲಿ ಇಂದು ಸಂಜೆ ನಡೆಯಿತು.

ಜವರಾಯಿಗೌಡರಿಗೆ ಟಿಕೆಟ್‌ ನೀಡಿದುದಕ್ಕೆ ಕಾರ್ಯಕರ್ತರು ಈ ರೀತಿ ಆಕ್ರೋಶ ವ್ಯಕ್ತಪಡಿಸಿದುದರಿಂದಾಗಿ ಪಟೇಲರಿಗೆ ಪ್ರಾರಂಭದಲ್ಲಿ ಭಾಷಣ ಮಾಡಲು ಸಾಧ್ಯವಾಗಲಿಲ್ಲ. ಆಗ ಚಿತ್ರ ನಟ ಅಂಬರೀಷ್‌, ಸಂಸತ್‌ ಸದಸ್ಯ ಕೃಷ್ಣ ಮತ್ತು ಭಾರಿ ನೀರಾವರಿ ಸಚಿವ ಕೆ.ಎನ್‌. ನಾಗೇಗೌಡ ಅವರು ಭಾವೋದ್ರೇಕದಿಂದ ಮಾತನಾಡಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.