ADVERTISEMENT

25 ವರ್ಷಗಳ ಹಿಂದೆ | ಬುಧವಾರ, 04–03–1998

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 23:00 IST
Last Updated 3 ಮಾರ್ಚ್ 2023, 23:00 IST
   

ಮತ್ತೆ ಅತಂತ್ರ ಸ್ಥಿತಿ: ಸರ್ಕಾರ ರಚನೆಗೆ ಕಾಂಗ್ರೆಸ್‌– ಬಿಜೆಪಿ ಕಸರತ್ತು

ನವದೆಹಲಿ, ಮಾರ್ಚ್‌ 3– ಹನ್ನೆರಡನೇ ಲೋಕಸಭೆ ಚುನಾವಣೆ ಫಲಿತಾಂಶಗಳು ಬಹುತೇಕ ಪ್ರಕಟಗೊಂಡಿದ್ದು, ಮತ್ತೆ ಅತಂತ್ರ ಲೋಕಸಭೆ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಬಹುಮತಕ್ಕೆ ಬೇಕಾದ ಮಾಯಾ ಸಂಖ್ಯೆ 273 ಸದಸ್ಯರ ಬೆಂಬಲ ಗಳಿಸಿಕೊಳ್ಳಲು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್‌ ಹಾಗೂ ಸಂಯುಕ್ತರಂಗವು ರಾಜಧಾನಿಯಲ್ಲಿ ತೀವ್ರ ಚಟುವಟಿಕೆ ಆರಂಭಿಸಿವೆ.

ADVERTISEMENT

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್‌ ಮತ್ತು ಸಂಯುಕ್ತರಂಗ ಮತ್ತೆ ಒಂದಾಗುವ ಲಕ್ಷಣಗಳು ಕಂಡುಬರುತ್ತಿದ್ದು, ತೆರೆಮರೆಯ ಸಂಧಾನ ಆರಂಭವಾಗಿದೆ.

***

ಇಂದು ಕೇಶುಭಾಯ್‌ ಪ್ರಮಾಣವಚನ

ನವದೆಹಲಿ, ಮಾರ್ಚ್‌ 3 (ಪಿಟಿಐ)– ಭಾರತೀಯ ಜನತಾ ಪಕ್ಷವು ಗುಜರಾತ್‌ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಪಡೆದಿದ್ದರೆ, ಹಿಮಾಚಲ ಪ್ರದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ. ತ್ರಿಪುರಾದಲ್ಲಿ ಆಡಳಿತಾರೂಢ ಎಡರಂಗ ಸರಳ ಬಹುಮತ ಗಳಿಸಿದೆ.

ಗುಜರಾತ್‌ನಲ್ಲಿ ಬಿಜೆಪಿಯು 1995ರಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಿತ್ತು. ಗುಜರಾತ್‌ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಕೇಶುಭಾಯ್‌ ಪಟೇಲ್‌ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಭೆಯ 65 ಸ್ಥಾನಗಳಲ್ಲಿ ಕಾಂಗ್ರೆಸ್‌ 31, ಬಿಜೆಪಿ 27 ಹಾಗೂ ಹಿಮಾಚಲ ವಿಕಾಸ ಪಕ್ಷ ನಾಲ್ಕು ಸ್ಥಾನಗಳನ್ನು ಗಳಿಸಿವೆ.

ತ್ರಿಪುರಾ ವಿಧಾನಸಭೆಯಲ್ಲಿ 60 ಸ್ಥಾನಗಳಲ್ಲಿ ಎಡರಂಗ 31 ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ಬಂದಿದೆ.

***

ಎಲ್ಲ ಫಲಿತಾಂಶ ಪ್ರಕಟಣೆನಂತರ ರಾಷ್ಟ್ರಪತಿ ಕ್ರಮ

ನವದೆಹಲಿ, ಮಾರ್ಚ್‌ 3 (ಯುಎನ್‌ಐ)– ಕೇಂದ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷ ಅಥವಾ ಗುಂಪು ಹಕ್ಕು ಪ್ರತಿಪಾದನೆ ಮಾಡಿದರೂ ಲೋಕಸಭೆಯ ಎಲ್ಲ ಫಲಿತಾಂಶ ಪ್ರಕಟಗೊಂಡ ನಂತರವೇ ರಾಷ್ಟ್ರಪತಿಕೆ.ಆರ್‌. ನಾರಾಯಣನ್‌ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈಗ ಅವರು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಮಾರ್ಚ್‌ 15ರೊಳಗೆ 12ನೇ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.