ADVERTISEMENT

25 ವರ್ಷಗಳ ಹಿಂದೆ: ಭಾನುವಾರ 9-11-1997

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:30 IST
Last Updated 8 ನವೆಂಬರ್ 2022, 19:30 IST
   

ರಾಜೀವ್ ಹತ್ಯೆ: ವಿ.ಪಿ. ಸಿಂಗ್, ಶೇಖರ್, ಕರುಣಾನಿಧಿ ವಿರುದ್ಧ ದೋಷಾರೋಪ

ನವದೆಹಲಿ, ನ. 8 (ಯುಎನ್ಐ, ಪಿಟಿಐ)– ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ, ಮಾಜಿ ಪ್ರಧಾನಿಗಳಾದ ವಿ.ಪಿ.ಸಿಂಗ್ ಮತ್ತು ಚಂದ್ರಶೇಖರ್ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಅವರು ವಿವಿಧ ಹಂತಗಳಲ್ಲಿ ಎಸಗಿದ ಲೋಪವೇ ಕಾರಣ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಜೈನ್ ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ಅವರ ವಿರುದ್ಧ ದೋಷಾರೋಪ ಹೊರಿಸಿದೆ.

ರಾಜೀವ್ ಗಾಂಧಿ ಅವರ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಎಲ್‌ಟಿಟಿಇಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಸಹಾಯ ಮಾಡಿದ್ದಾರೆ ಎಂದು ತೀವ್ರವಾಗಿ ಅರೋಪಿಸಿರುವ ಆಯೋಗವು, ರಾಜೀವ್ ಗಾಂಧಿ ಅವರ ಜೀವಕ್ಕೆ ಇದ್ದ ಅಪಾಯವನ್ನು ಅಂದಾಜು ಮಾಡುವಲ್ಲಿ ಮಾಜಿ ಪ್ರಧಾನಿಗಳಾದ ವಿ.ಪಿ.ಸಿಂಗ್ ಮತ್ತು ಚಂದ್ರಶೇಖರ್ ಅವರು ವಿಫಲರಾದರು ಎಂದಿದೆ.

ADVERTISEMENT

ಆಕ್ಷೇಪ: ವರದಿ ಬಹಿರಂಗಗೊಂಡಿರುವುದಕ್ಕೆ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಂ.ಸಿ. ಜೈನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಟೇಲ್ ನಾಯಕತ್ವದಲ್ಲಿ ವಿಶ್ವಾಸ– ಸಿಂಧ್ಯ

ಬೆಂಗಳೂರು, ನ. 8– ‘ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರನ್ನು ಅಸ್ಥಿರಗೊಳಿಸಲು ನಾವು (ಸಚಿವರು) ಹೋಗುವುದಿಲ್ಲ; ಯಾರಾದರೂ ಅಂತಹ ಪ್ರಯತ್ನ ಮಾಡಹೊರಟರೆ ವಿಫಲರಾಗುತ್ತಾರೆ’ ಎಂದು ಪಿ.ಜಿ.ಆರ್. ಸಿಂಧ್ಯ ಅವರು ಇಂದು ಇಲ್ಲಿ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರನ್ನು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯಲ್ಲಿ ನಡೆದ ಜನತಾದಳ ಶಾಸಕರ ಸಭೆ ಕಡೆಗೆ ಗಮನ ಸೆಳೆದಾಗ ‘ಈ ವಿಚಾರದಲ್ಲಿ ಪಟೇಲ್ ಅವರು ಹೇಗೆ ಪ್ರತಿಕ್ರಿಯಿಸಿದ್ದಾರೋ ಎಲ್ಲವನ್ನೂ ನಾವು ಒಪ್ಪುತ್ತೇವೆ’ ಎಂದು ಹೇಳಿದರು.

‘ಪಟೇಲ್ ಅವರು ತಮ್ಮ ಸ್ಥಾನ ತ್ಯಜಿಸುವುದಿಲ್ಲ. ಆ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಎಲ್ಲರೂ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದೇವೆ. ಪಟೇಲರ ನಾಯಕತ್ವಕ್ಕೆ ಯಾವುದೇ ರೀತಿಯಿಂದಲೂ ತೊಂದರೆ ಇಲ್ಲ ಎಂದು ದೇವೇಗೌಡರೂ ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.