ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, ಜನವರಿ 9, 1998

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:30 IST
Last Updated 8 ಜನವರಿ 2023, 19:30 IST
   

ಫಲಿಸದ ಹೆಗಡೆ ಗಡುವು: ದಳ ಸರ್ಕಾರ ಸುರಕ್ಷಿತ
ಬೆಂಗಳೂರು, ಜನವರಿ 8–
ಮಾಜಿ ಮುಖ್ಯಮಂತ್ರಿ ಹಾಗೂ ಲೋಕಶಕ್ತಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಅವರು ತಮ್ಮ ಪಕ್ಷಕ್ಕೆ ಸೇರುವಂತೆ ನೀಡಿದ್ದ ಕರೆಯನ್ನು ಜನತಾದಳದಲ್ಲಿರುವ ಅವರ ಬೆಂಬಲಿಗರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಜೆ.ಎಚ್. ಪಟೇಲ್‌ ನೇತೃತ್ವದ ರಾಜ್ಯ ಜನತಾದಳದ ಸರ್ಕಾರ ‘ಅಪಾಯ’ದಿಂದ ಪಾರಾಗಿದೆ.

ಲೋಕಶಕ್ತಿ ಸೇರಲು ಹೆಗಡೆ ಅವರು ಜನತಾದಳದವರಿಗೆ ನೀಡಿದ್ದ ಗಡುವು ಇಂದು ಮುಕ್ತಾಯಗೊಂಡಿದ್ದು, ಪಟೇಲ್‌ ಸಂಪುಟದ ಯಾವುದೇ ಸದಸ್ಯರಾಗಲಿ ಅಥವಾ ದಳದ ಶಾಸಕರಾಗಲಿ ಲೋಕಶಕ್ತಿ ಸೇರಲು ಮುಂದಾಗಿಲ್ಲ. ಪಕ್ಷ ತೊರೆದು ಬರಲು ಹೆಗಡೆ ಅವರು ಜ.8 ಕಡೆಯ ದಿನ ಎಂದು ನಿಗದಿಪಡಿಸಿದ್ದರಿಂದ ಜನತಾದಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಸರ್ಕಾರ ಆತಂಕಕ್ಕೆ ಈಡಾಗಿತ್ತು.

ಚಿತ್ರದುರ್ಗ ಬಳಿ ಉದ್ರಿಕ್ತ ಜನರಿಂದ ಠಾಣೆಗೆ ಮುತ್ತಿಗೆ
ಚಿತ್ರದುರ್ಗ, ಜನವರಿ 8‍–
ಪೊಲೀಸ್‌ ವಾಹನ ಹರಿದು ಐವರು ಮೃತಪಟ್ಟ ಘಟನೆಯಿಂದ ಉದ್ರಿಕ್ತರಾದ ಗ್ರಾಮಸ್ಥರು ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಠಾಣೆಗೆ ಮುತ್ತಿಗೆ ಹಾಕಿ, ಪೊಲೀಸ್‌ ವಾಹನವೊಂದನ್ನು ಸುಟ್ಟು ಹಾಕಿದ ಘಟನೆ ವರದಿಯಾಗಿದೆ.

ADVERTISEMENT

ಬುಧವಾರ ದೊಡ್ಡ ಚೆಲ್ಲೂರು ಗ್ರಾಮದ ಜನರು ಪರಶುರಾಂಪುರದಲ್ಲಿ ಚಿತ್ರವೊಂದರ ಎರಡನೇ ಆಟ ನೋಡಿಕೊಂಡು ಊರಿಗೆ ವಾಪಸಾಗುತ್ತಿದ್ದಾಗ ಬೆಳಗಿನ ಜಾವ ಸುಮಾರು 1.30ರಲ್ಲಿ ಪೊಲೀಸ್‌ ಜೀಪೊಂದು ಅವರ ಮೇಲೆ ಚಿಕ್ಕಚೆಲ್ಲೂರು ಫಾರೆಸ್ಟ್‌ ಬಳಿ ಹರಿದು ಸ್ಥಳದಲ್ಲೇ ನಾಲ್ವರು ಸತ್ತು, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತರಾದರು. ಮತ್ತಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.