ಭಾರತದ ಆರ್ಥಿಕ ಅಭಿವೃದ್ಧಿಗೆ ಎಲ್ಲ ನೆರವು: ಅಮೆರಿಕ ಭರವಸೆ
ನವದೆಹಲಿ, ಜ. 15 (ಪಿಟಿಐ)– ಭಾರತದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ವೃದ್ಧಿಪಡಿಸಿಕೊಳ್ಳಲು ಅಮೆರಿಕ ಬದ್ಧವಾಗಿದೆ. ವಿಶ್ವ ಆರ್ಥಿಕತೆಯಲ್ಲಿ ಭಾರತ ಅರ್ಹ ಸ್ಥಾನ ಗಳಿಸಿಕೊಳ್ಳು
ವಂತೆ ಮಾಡಲು ಅದರ ಆರ್ಥಿಕ ಸುಧಾರಣೆಗಳಿಗೆ ತಮ್ಮ ದೇಶ ಬೆಂಬಲ ನೀಡುವುದು ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ರೊನಾಲ್ಡ್ ಬ್ರೌನ್ ಹೇಳಿದರು.
ಉನ್ನತ ನಿಯೋಗದ ನಾಯಕರಾಗಿ ಭಾರತಕ್ಕೆ ಆಗಮಿಸಿರುವ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಕಿಡ್ನಿ ವಲಸೆ
ನವದೆಹಲಿ, ಜ. 15 (ಯುಎನ್ಐ)– ಭಾರತೀಯರು ಹೆಚ್ಚು ಹೆಚ್ಚಾಗಿ ವಿದೇಶಗಳಲ್ಲಿ ಕಿಡ್ನಿ ಮಾರಾಟ ಮಾಡಲು ಆರಂಭಿಸಿರುವ ಕಾರಣ ದೇಶದಲ್ಲಿ ಈಗ ಕಿಡ್ನಿಗಳ ವಲಸೆ ಆರಂಭವಾಗಿದೆ.
ಪ್ರವಾಸಕ್ಕಾಗಿ ವಿದೇಶಗಳಿಗೆ ಹೋಗಿ ಕಿಡ್ನಿ ಮಾರಾಟ ಮಾಡಿ ಬರುವ ಜಾಲವೊಂದನ್ನು ಇತ್ತೀಚೆಗೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಪ್ರಯಾಣಿಕರು ತಮ್ಮ ಹೊಟ್ಟೆಯಲ್ಲಿ ಮಾದಕದ್ರವ್ಯ ಕಳ್ಳಸಾಗಣೆ ನಡೆಸುತ್ತಿದ್ದಾರೆಯೇ ಎಂದು ಪರೀಕ್ಷಿಸಿದಾಗ ಈ ವಿಷಯ ಪತ್ತೆಯಾಯಿತು.
ಧ್ವಜಾರೋಹಣ: ಬಿಜೆಪಿ ಗಡುವು
ಬೆಳಗಾವಿ, ಜ. 15– ಹುಬ್ಬಳ್ಳಿಯ ವಿವಾದಿತ ಈದಗಾ ಮೈದಾನದಲ್ಲಿ ಈ ಸಾರಿಯಾದರೂ ಗಣರಾಜ್ಯ ದಿನದಂದು ರಾಷ್ಟ್ರಧ್ವಜಾರೋಹಣ ಮಾಡುವ ಸಂಬಂಧದಲ್ಲಿ ಇದೇ 19ರೊಳಗಾಗಿ ಸರ್ಕಾರ ಖಚಿತ ನಿಲುವನ್ನು ತಿಳಿಸಬೇಕು ಎಂದು ಬಿಜೆಪಿ ಧುರೀಣ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿ ಗಡುವು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.