ADVERTISEMENT

ಶುಕ್ರವಾರ, 1–7–1994

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:45 IST
Last Updated 30 ಜೂನ್ 2019, 19:45 IST

ದಕ್ಷಿಣ ಕನ್ನಡ: ಭಾರಿ ಮಳೆ ಹಾನಿ, ಸಾವು

ಮಂಗಳೂರು, ಜೂನ್ 30– ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ 60ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಬತ್ತದ ಸಸಿಗಳು ಹಾಗೂ ರಸ್ತೆಗಳಿಗೆ ಆದ ಹಾನಿಯೂ ಸೇರಿದಂತೆ ಲಕ್ಷಾಂತರ ರೂ.ಗಳ ಸೊತ್ತು ನಾಶವಾಗಿದೆ. ಯುವಕನೊಬ್ಬ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋದ ದುರ್ಘಟನೆಯೂ ಇಂದು ನಡೆದಿದೆ.

9 ಒಪ್ಪಂದಕ್ಕೆ ಭಾರತ, ರಷ್ಯ ಸಹಿ

ADVERTISEMENT

ಮಾಸ್ಕೋ, ಜೂನ್ 30 (ಯುಎನ್‌ಐ)– ಜನಾಂಗೀಯ ಮತ್ತು ಧಾರ್ಮಿಕ ವಿರಸಗಳನ್ನು ಕೆದಕುವ ಪ್ರಯತ್ನಗಳನ್ನು ಬಲವಾಗಿ ವಿರೋಧಿಸುವ ಮತ್ತು ಅಂತರರಾಷ್ಟ್ರೀಯ ಸಮುದಾಯವು ಬಹುಜನಾಂಗಗಳ ಅಸ್ತಿತ್ವ ಗೌರವಿಸಬೇಕೆಂದು ಕರೆ ನೀಡುವ ರಾಜಕೀಯ ಘೋಷಣೆ ಮತ್ತು ಒಂಬತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಪ್ರಧಾನಿ ನರಸಿಂಹರಾವ್ ಮತ್ತು ರಷ್ಯ ಅಧ್ಯಕ್ಷ ಬೋರಿಸ್ ಯೆಲ್ಸಿನ್ ಇಂದು ಇಲ್ಲಿನ ಗ್ರ್ಯಾಂಡ್ ಕ್ರೆಮ್ಲಿನ್‌ ಅರಮನೆಯಲ್ಲಿ ನಡೆದ ಶೃಂಗಸಭೆಯಲ್ಲಿ ಸಹಿ ಹಾಕಿದರು.

ಭಾರತ ಮತ್ತು ರಷ್ಯದಂಥ ಬಹುಜನಾಂಗಗಳು ನೆಲೆಸಿರುವ ದೇಶಗಳ ಹಿತಾಸಕ್ತಿ ಕಾಪಾಡುವುದಕ್ಕೆ ಉಭಯದೇಶಗಳ ಬದ್ಧತೆಯನ್ನು ಈ ಮಾಸ್ಕೋ ಘೋಷಣೆ ಸಾರುತ್ತಿದೆ.

ರಾಷ್ಟ್ರಗಳೊಳಗೆ ಮತ್ತು ಅಂತರರಾಷ್ಟ್ರೀಯವಾಗಿ ಧಾರ್ಮಿಕ ಪ್ರತ್ಯೇಕತಾವಾದ, ಉಗ್ರ ರಾಷ್ಟ್ರೀಯವಾದ ಮತ್ತು ಜನಾಂಗೀಯ ಅಸಹನೆಗಳನ್ನು ಕೆದುಕುವ ಪ್ರಯತ್ನಗಳನ್ನು ಉಭಯದೇಶಗಳೂ ಬಲವಾಗಿ ವಿರೋಧಿಸಲಿದೆ ಎಂದು ಈ ಘೋಷಣೆ ಸಾರಿದೆ.

ಪ್ರೊ. ಶೇಷಾದ್ರಿ ಕೊಲೆ ಆರೋಪಿ ಖುಲಾಸೆ

ಬೆಂಗಳೂರು, ಜೂನ್ 30– ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ವಸತಿಯಲ್ಲಿ 1989ರ ಜನವರಿ 20ರಂದು ನಡೆದ ಪ್ರೊ. ಕೆ.ಎನ್‌.ಶೇಷಾದ್ರಿ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಇಬ್ಬರು ಅಪರಾಧಿಗಳನ್ನು ಹೈಕೋರ್ಟ್ ಇಂದು ಖುಲಾಸೆ ಮಾಡಿತು.

ಕರ್ನಾಟಕ ವಿಶ್ವವಿದ್ಯಾನಿಲಯ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಕೆ.ಎನ್‌. ಶೇಷಾದ್ರಿ ಅವರ ಕೊಲೆ ಮತ್ತು ಅವರ ಪತ್ನಿಯ ಕೊಲೆ ಪ್ರಯತ್ನದ ಪ್ರಕರಣ ಜನರಲ್ಲಿ ಕುತೂಹಲ ಕೆರಳಿಸಿತ್ತು. ಇದರಲ್ಲಿ ಮೂವರು ಆರೋಪಿಗಳಾಗಿದ್ದರು. ಆದರೆ ಒಬ್ಬ ಸಿಗಲೇ ಇಲ್ಲ. ಇಬ್ಬರ ಮೇಲೆ ಖಟ್ಲೆ ನಡೆದು ಅಲ್ಲಿನ ಸೆಷನ್ಸ್ ನ್ಯಾಯಾಲಯ ಅಪರಾಧಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.