ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಳೆ ಅನಾಹುತ: 3 ಸಾವು
ಮಂಗಳೂರು, ಜುಲೈ 12– ಸೋಮವಾರ ಬೆಳಿಗ್ಗೆಯಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಗೆ ಇಬ್ಬರು ಬಲಿಯಾಗಿದ್ದು, ಲಕ್ಷಾಂತರ ರೂಪಾಯಿಗಳ ಆಸ್ತಿ–ಪಾಸ್ತಿ ನಷ್ಟವಾಗಿದೆ.
ಕುಂದಾಪುರ ಸಮೀಪದ ಹಟ್ಟಿಕುದುರಿಯಿಂದ ಹಟ್ಟಿಯಂಗಡಿಗೆ ದೋಣಿ ಮೂಲಕ ನದಿ ದಾಟುತ್ತಿದ್ದ ಮೂವರು ಭಾರೀ ಗಾಳಿ
ಮಳೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋದರು. ಈ ಮೂವರ ಪೈಕಿ ಒಬ್ಬ ಈಜಿ ದಡ ಸೇರಿದ್ದು ಇನ್ನಿಬ್ಬರು ದೋಣಿ ಸಹಿತ ನೀರುಪಾಲಾದರು. ಇವರ ಮೃತ ದೇಹ ಇದುವರೆಗೆ ದೊರೆತಿಲ್ಲ. ಶೋಧನಾ ಕಾರ್ಯ ಮುಂದುವರೆದಿದೆ. ಪುತ್ತೂರಿನಲ್ಲಿ ವೃದ್ಧೆಯೊಬ್ಬಳು ಸತ್ತಿದ್ದು, ತಣ್ಣೀರುಬಾವಿ ಕಡಲು ತೀರದಲ್ಲಿ ಮೀನುಗಾರನೊಬ್ಬ ಕಾಣೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಬೇಹುಗಾರಿಕೆ: ಇಬ್ಬರು ಪಾಕ್ ಅಧಿಕಾರಿಗಳ ಉಚ್ಚಾಟನೆ
ನವದೆಹಲಿ, ಜುಲೈ 12 (ಯುಎನ್ಐ)– ಭಾರತದಲ್ಲಿ ಗೂಢಚರ್ಯೆ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನದ ಒಬ್ಬ ಹಿರಿಯ ರಾಜತಾಂತ್ರಿಕ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಭಾರತ ಇಂದು ಉಚ್ಚಾಟಿಸಿತು. ಇದಕ್ಕೆ ಪ್ರತೀಕಾರ ಎಂಬಂತೆ, ಭಾರತದ ರಾಜತಾಂತ್ರಿಕ ವಿ.ಎಸ್. ಚವಾಣ್ ಅವರು 7 ದಿನಗಳ ಒಳಗೆ ಇಸ್ಲಾಮಾಬಾದ್ ಬಿಟ್ಟು ತೊಲಗುವಂತೆ ಪಾಕಿಸ್ತಾನ ಇಂದು ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.