ADVERTISEMENT

50 ವರ್ಷಗಳ ಹಿಂದೆ: ಗುರುವಾರ 1.7.1971

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 21:21 IST
Last Updated 30 ಜೂನ್ 2021, 21:21 IST
   

ಜಮೀನು ಹೋದರೆ ಬದಲು ಭೂಮಿ
ಬೆಂಗಳೂರು, ಜೂನ್ 30–
ಹೇಮಾವತಿ ಜಲಾಶಯ ನಿರ್ಮಾಣ ಕಾರಣ ಜಮೀನು ಕಳೆದುಕೊಳ್ಳುವವರಿಗೆ ಬದಲು ಜಮೀನು ಒದಗಿಸುವ ಸಂಬಂಧದ ನಿಯಮಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ.

4 ಎಕರೆಗಿಂತ ಕಡಿಮೆ ಕುಷ್ಕಿ ಜಮೀನು ಮುಳುಗಡೆಯಾಗುವ ರೈತರಿಗೆ 4 ಎಕರೆ ಕುಷ್ಕಿ ಜಮೀನನ್ನು ಬೇರೆ ಕಡೆ ಒದಗಿಸಲಾಗುವುದು.

ನಾಲ್ಕು ಎಕರೆಗಿಂತ ಹೆಚ್ಚು ಪ್ರದೇಶ ಮುಳುಗಡೆಯಾದ ಸಂದರ್ಭಗಳಲ್ಲಿ, ಮುಳುಗಡೆಯಾದ ಪ್ರದೇಶದ ಅರ್ಧದಷ್ಟು ಜಮೀನನ್ನು ಕನಿಷ್ಠ 4 ಎಕರೆ ಹಾಗೂ ಪರಮಾವಧಿ 10 ಎಕರೆಗಳ ಮಿತಿಗೊಳಪಟ್ಟು ಒದಗಿಸಲಾಗುವುದು.

ADVERTISEMENT

ಮೂವರೂ ‘ಸೋಯುಜ್’ ಗಗನಗಾಮಿಗಳ ಮರಣ
ಮಾಸ್ಕೋ, ಜೂನ್ 30–
ಅಂತರಿಕ್ಷದಲ್ಲಿ 24 ದಿನಗಳಷ್ಟು ದೀರ್ಘಕಾಲ ಬೀಡುಬಿಟ್ಟು ಹೊಸ ವಿಕ್ರಮ ಸಾಧಿಸಿದ ರಷ್ಯಾದ ಅಂತರಿಕ್ಷ ನೌಕೆ ಸೋಯುಜ್‌–11ರ ಮೂವರು ಗಗನ ಯಾತ್ರಿಗಳು ಇಂದು ತಮ್ಮ ನೌಕೆಯಲ್ಲೇ ಮೃತರಾದರು.

ಕಾರ್ಯಕ್ರಮದಂತೆ ಕರಾರುವಾಕ್ಕಾಗಿ ಭೂಮಿಗೆ ವಾಪಸು ಇಳಿದು ಬಂದಂತೆ ಕಂಡುಬಂದ ಸೋಯುಜ್ ನೌಕೆ ಭೂಸ್ಪರ್ಶ ಮಾಡಿದ ತಕ್ಷಣದಲ್ಲೇ, ಹೆಲಿಕಾಪ್ಟರಿನಲ್ಲಿ ಬಂದು ಅದನ್ನು ಸಂಧಿಸಿದ ಸಹಾಯಕರು ನೌಕೆಯ ಬಾಗಿಲನ್ನು ತೆಗೆದಾಗ, ಅದರಲ್ಲಿದ್ದ ಮೂವರು ಗಗನಯಾತ್ರಿಗಳೂ ಸತ್ತು ಹೋಗಿದ್ದುದು ಕಂಡುಬಂತು.

ಸುದೀರ್ಘ ಯಾನ ಕೈಗೊಂಡಿದ್ದ ಜಾರ್ಜಿ ಡೊಬ್ರೋವೋಲ್‌ಸಿ, ವ್ಲಾಡಿಸ್ಲಾವ್ ವೋಲ್ನೋವ್ ಮತ್ತು ವಿಕ್ಟರ್ ಪ್ಯಾಟ್ಸೆಯೇವ್ ಈ ಮೂವರು, ಅಂತರಿಕ್ಷ ದಲ್ಲಿ ಮಾನವ ಎಂದೂ ನಡೆಸದಿದ್ದಂಥ ಅತ್ಯಂತ ವಿವರಪೂರ್ಣ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದ್ದರು.

ಶಾಖ ರಕ್ಷಣಾ ಕವಚದ ವಿಫಲತೆ ಸಾವಿಗೆ ಕಾರಣ ಅಮೆರಿಕ ತಜ್ಞರ ಊಹೆ
ಹ್ಯೂಸ್ಟನ್, ಜೂನ್ 30–
ಗಗನನೌಕೆ ‘ಸೋಯುಜ್‌–11’ ಭೂಮಿಯ ವಾತಾವರಣವನ್ನು ಮತ್ತೆ ಪ್ರವೇಶಿಸುವುದರಲ್ಲಿದ್ದಾಗ ಶಾಖ ರಕ್ಷಣಾ ಕವಚದ ವ್ಯವಸ್ಥೆ ವಿಫಲವಾದುದೇ ರಷ್ಯಾ ಗಗನಯಾತ್ರಿಗಳ ಸಾವಿಗೆ ಕಾರಣವಾಗಿರಬಹುದೆಂದು ಅಂತರಿಕ್ಷಯಾನ ಕುರಿತ ಇಲ್ಲಿಯ ತಜ್ಞರು ಊಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.