ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 14–4–1972

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 15:36 IST
Last Updated 13 ಏಪ್ರಿಲ್ 2022, 15:36 IST
   

ಶಾಲಾ ಶಿಕ್ಷಣದ ಮರು ವ್ಯವಸ್ಥೆ, ಪರೀಕ್ಷೆ ಪದ್ಧತಿ ಬದಲಾವಣೆ ಕೇಂದ್ರ ಸರ್ಕಾರದ ಉದ್ದೇಶ

ನವದೆಹಲಿ, ಏ. 13– ಸಮುದಾಯ ಜೀವನಕ್ಕೆ ಶೀಘ್ರದಲ್ಲಿಯೇ ಪುನರ್‌ ವ್ಯವಸ್ಥೆಗೊಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಸಯ್ಯದ್ ನೂರುಲ್ ಹಸನ್ ಇಂದು ಲೋಕಸಭೆಗೆ ತಿಳಿಸಿದರು.

ಶಿಕ್ಷಣದತ್ತ ಸಮಗ್ರ ದೃಷ್ಟಿಯನ್ನು ತಳೆಯಲು ಸಾಧ್ಯವಾಗುವಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಮಾದರಿ ಶಾಲೆಗಳ ಮಾಲಿಕೆಯೊಂದನ್ನು ಸರ್ಕಾರ ಆರಂಭಿಸುವುದೆಂದು ಅವರು ಹೇಳಿದರು. ತಮ್ಮ ಖಾತೆಯ ಬೇಡಿಕೆಗಳ ಬಗ್ಗೆ ಆರು ಗಂಟೆಗಳ ಚರ್ಚೆಗೆ ಉತ್ತರ ನೀಡಿದ ಅವರು ಪ್ರಾಥಮಿಕ, ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಶಿಕ್ಷಣ ಸ್ವರೂಪಗಳನ್ನು ಬದಲಾಯಿಸುವುದು ಇದರ ಉದ್ದೇಶವೆಂದರು.

ADVERTISEMENT

ಈಗಿನ ಪರೀಕ್ಷೆ ಪದ್ಧತಿ ತೀರ ಅತೃಪ್ತಿಕರವಾಗಿದೆಯೆಂದೂ ಅದರಲ್ಲಿ ತೀಕ್ಷ್ಣ ಬದಲಾವಣೆ ತರುವ ಉದ್ದೇಶವಿದೆಯೆಂದೂ ಅವರು ಹೇಳಿದರು.

ಕಲ್ಬುರ್ಗಿ ಜಿಲ್ಲೆಯಲ್ಲಿ ಸಿಡುಬು ರೋಗ 36 ಮಂದಿ ಸಾವು

ಕಲ್ಬುರ್ಗಿ, ಏ. 13– ಕಲ್ಬುರ್ಗಿ ನಗರದಲ್ಲಿ ಸತ್ತ 5 ಮಂದಿಯು ಸೇರಿ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಸಿಡುಬು ರೋಗದಿಂದ ಒಟ್ಟು 36 ಮಂದಿ ಮೃತರಾಗಿದ್ದಾರೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ರಾಮರಾವ್ ಅವರು ಇಂದು ಇಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಚಿತ್ತರಂಜನದಾಸ್ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಿಡುಬುರೋಗ ನಿವಾರಣಾ ಸಮಿತಿಯ ತುರ್ತು ಸಭೆಯಲ್ಲಿ ಸಿಡುಬು ರೋಗವನ್ನು ಮತ್ತಷ್ಟು ಹರಡದಂತೆ ತಡೆಯಲು ಕೈಗೊಳ್ಳಬೇಕಾದ ತ್ವರಿತ ಕ್ರಮಗಳನ್ನು ಕುರಿತು ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.