ADVERTISEMENT

50 ವರ್ಷಗಳ ಹಿಂದೆ | ಗುರುವಾರ, 2–4–1970

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 19:30 IST
Last Updated 1 ಏಪ್ರಿಲ್ 2020, 19:30 IST

ಮೈಸೂರು– ಮಹಾರಾಷ್ಟ್ರ ಗಡಿ ವಿವಾದ: ಗೋಪಾಲಗೌಡ ಮನವಿ
ನವದೆಹಲಿ, ಏ. 1–
ಉಭಯ ಪಕ್ಷಗಳಿಗೂ ನೋವಾಗದಂತೆ ಮೈಸೂರು– ಮಹಾರಾಷ್ಟ್ರ ಗಡಿ ವಿವಾದಕ್ಕೆ ಶೀಘ್ರ ಪರಿಹಾರ ಕಂಡುಹಿಡಿಯುವುದರಲ್ಲಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಅಡ್ಡಿಪಡಿಸಬೇಡಿ ಎಂದು ಮೈಸೂರು ಶಾಸಕರ ನಿಯೋಗದ ನಾಯಕ ಎಸ್‌.ಗೋಪಾಲಗೌಡರು ಇಂದು ಇಲ್ಲಿ ಕೇಂದ್ರ ಗೃಹ ಸಚಿವ ಚವಾಣರಿಗೆ ಮನವಿ ಮಾಡಿಕೊಂಡರು.

ದೇಶದ ಗೃಹ ಸಚಿವರು ಪ್ರಾಂತೀಯ ಮನೋಭಾವ ತಾಳಿರಬಾರದು. ಮಹಾಜನ್‌ ಆಯೋಗದ ಶಿಫಾರಸನ್ನು ಜಾರಿಗೆ ತರಲಾಗದಂತೆ ಚವಾಣರು ಅದರ ಮೇಲೆ ಪಟ್ಟಾಗಿ ಕುಳಿತಿರುವುದರಿಂದ ತಾವು ಈ ಮನವಿ ಮಾಡಿಕೊಳ್ಳುವುದು ಅನಿವಾರ್ಯವಾಯಿತೆಂದು ಗೋಪಾಲಗೌಡರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.

ಮಹಾಜನ್‌ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ನಿರ್ಧಾರ ಕೈಗೊಳ್ಳುವುದು ತಮಗೆ ಸೇರಿದ್ದಲ್ಲವೆಂದೂ ಆ ಬಗ್ಗೆ ಸಂಸತ್‌ ನಿರ್ಧಾರ ಕೈಗೊಳ್ಳಬೇಕೆಂದೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ನಿಯೋಗಕ್ಕೆ ತಿಳಿಸಿದರೆಂದು ಅವರು ಹೇಳಿದರು.

ADVERTISEMENT

ಕಾವೇರಿ ಜಲ ವಿವಾದ: ರಾಜ್ಯ ಸುರಕ್ಷಿತ
ನವದೆಹಲಿ, ಏ. 1–
ಕಾವೇರಿ ನದಿ ನೀರಿನ ಬಳಕೆ ಬಗ್ಗೆ ತಮಿಳುನಾಡು ಎತ್ತಿರುವ ವಿವಾದದಲ್ಲಿ ಮೈಸೂರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀರಾವರಿ ಸಚಿವ ಡಾ. ಕೆ.ಎಲ್‌.ರಾವ್‌ ಅವರನ್ನು ಮೈಸೂರು ನಿಯೋಗ ಭೇಟಿ ಮಾಡಿ ಕೇಳಿದಾಗ ‘ನೀವು ಸುರಕ್ಷಿತ’ ಎಂದು ರಾವ್‌ ಅವರು ನಿಯೋಗಕ್ಕೆ ತಿಳಿಸಿದರೆಂದು ನಿಯೋಗದ ನಾಯಕ ಗೋಪಾಲಗೌಡರು ಇಂದು ಹೇಳಿದರು.

ನಿಯೋಗವು ಆಡಳಿತ ಕಾಂಗ್ರೆಸ್‌ ಅಧ್ಯಕ್ಷ ಜಗಜೀವನರಾಮ್‌ ಅವರನ್ನು ಭೇಟಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.