ADVERTISEMENT

50 ವರ್ಷಗಳ ಹಿಂದೆ | ಬುಧವಾರ 29–4–1970

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 20:00 IST
Last Updated 28 ಏಪ್ರಿಲ್ 2020, 20:00 IST

ಕ್ಷಾಮ ಪ್ರದೇಶಕ್ಕೆ ಸಮೃದ್ಧಿ: ಆಲಮಟ್ಟಿ ಜಲಾಶಯ ಯೋಜನೆಗೆ ಶಂಕುಸ್ಥಾಪನೆ
ಬಿಜಾಪುರ, ಏ. 28– ಬಿಜಾಪುರ, ಬಿದರೆ, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳ ಕ್ಷಾಮ ಪ್ರದೇಶಗಳನ್ನು ಸಮೃದ್ಧಿಯ ಬೀಡಾಗಿ ಪರಿವರ್ತಿಸಲಿರುವ ಆಲಮಟ್ಟಿ ಜಲಾಶಯ ಯೋಜನೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನೆರವೇರಿಸಿದರು. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಈ ಅಣೆಕಟ್ಟು ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅತಿ ದೊಡ್ಡದು.

ಹಲವು ಕಾರಣಗಳಿಂದಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಿಧಾನವಾಯಿತೆಂದ ಮುಖ್ಯಮಂತ್ರಿ, ಯೋಜನೆ ಕೆಲಸವನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲವೆಂದರು. ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದ್ದಕ್ಕಾಗಿ ಅವರು ಸಂತೋಷ ವ್ಯಕ್ತಪಡಿಸಿ, ಈ ಯೋಜನೆಯಿಂದ ನಿರ್ವಸತಿಗರಾಗಿರುವ ಜನರಿಗೆ ಶೀಘ್ರವಾಗಿ ಪುನರ್ವಸತಿ ಕಲ್ಪಿಸಲಾಗುವುದೆಂದರು.

ಕೈಬರಹ– ಉಕ್ತಲೇಖನ ಪಠ್ಯಕ್ರಮ ಮತ್ತೆ ಜಾರಿಗೆ?
ಬೆಂಗಳೂರು, ಏ. 28– ವಿದ್ಯಾರ್ಥಿಗಳ ಕೈಬರಹ ಉತ್ತಮಗೊಳ್ಳುವಂತಾಗಲು ಹಾಗೂ ಚೊಕ್ಕ ಭಾಷೆ ಬರೆಯುವಂತಾಗಲು ಪ್ರಾಥಮಿಕ ಶಾಲೆಗಳಲ್ಲಿ ಕಾಪಿ ಬರೆಸುವ ಹಾಗೂ ಉಕ್ತ ಲೇಖನ ತರಗತಿಗಳನ್ನು ಕಡ್ಡಾಯ ಮಾಡುವ ಸಂಭವವಿದೆ.

ADVERTISEMENT

ಇಂದು ಶಿಕ್ಷಣ ಸಚಿವ ಶ್ರೀ ಶಂಕರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಶಿಕ್ಷಣ ಸಲಹಾ ಮಂಡಳಿ ಈ ಎರಡು ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ಮಿತಿಮೀರಿ ನಾನಾ ರೂಪದ ಶುಲ್ಕಗಳನ್ನು ವಸೂಲು ಮಾಡುತ್ತಿವೆ ಎಂದಿರುವ ಸಾರ್ವಜನಿಕ ದೂರನ್ನು ಇಂದು ನಡೆದ ಮಂಡಳಿಯ ಸಭೆ ಪರಿಶೀಲಿಸಿತು.

ಚೀನೀ ಉಪಗ್ರಹ ಕುರಿತು ಕಳವಳ
ನವದೆಹಲಿ, ಏ. 28– ಹತ್ತು ವರ್ಷಗಳ ಅವಧಿಯ ಚೌಕಟ್ಟಿನಲ್ಲಿ ತಯಾರಿಸುತ್ತಿರುವ ತನ್ನ ಅಂತರಿಕ್ಷ ಕಾರ್ಯಕ್ರಮವನ್ನು ಸರ್ಕಾರವು ಚೀನೀಯರು ಪಥಕ್ಕೆ ಉಪಗ್ರಹವೊಂದನ್ನು ಹಾರಿಸಿ ಬಿಟ್ಟಿರುವುದರ ಬೆಳಕಿನಲ್ಲಿ ಪುನರ್‌ವಿಮರ್ಶಿಸ ಬೇಕಾಗಿದೆ ಎಂದು ರಕ್ಷಣಾ ಸಚಿವ ಶ್ರೀ ಸ್ವರಣ್‌ಸಿಂಗ್‌ ಲೋಕಸಭೆಗೆ ತಿಳಿಸಿದರು.

ಈ ಉಪಗ್ರಹದಿಂದ ಭಾರತದ ಭದ್ರತೆ ಮೇಲಾಗುವ ಪರಿಣಾಮದ ಕುರಿತು ತರಲಾಗಿದ್ದ ಗಮನಸೆಳೆಯುವ ಸೂಚನೆ ಮೇಲೆ ಅವರು ಈ ಹೇಳಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.