ಉಗುರಿನ ಬುಡಕ್ಕೆ ಶಾಯಿ ಗುರುತು
ಬೆಂಗಳೂರು, ಏ. 29– ಬೆರಳಿನ ಮೇಲೆ ಬದಲಾಗಿ ಉಗುರಿನ ಬುಡದಲ್ಲಿ ಶಾಯಿ ಹಚ್ಚುವುದು ಬರುವ ಉಪಚುನಾವಣೆಯಲ್ಲಿ ಮತ ಭ್ರಷ್ಟಾಚಾರ ತಪ್ಪಿಸಲು ಜಾರಿಗೆ ತರಲು ಉದ್ದೇಶಿಸಿರುವ ಮೂರು ಹೊಸ ವಿಧಾನಗಳಲ್ಲಿ ಒಂದು. ಉಳಿದ ಎರಡು: ಮತಪತ್ರಗಳ ಟಖಾವಣೆ ಮತ್ತು ಪ್ರತೀ ಮತಪತ್ರದ ಮೇಲೂ ಮತಗಟ್ಟೆ ಅಧಿಕಾರಿ ಸಹಿ.
ಮತಪತ್ರಗಳ ಟಖಾವಣೆಯು ಮತದಾನದ ರಹಸ್ಯವನ್ನು ಪೂರ್ಣವಾಗಿ ರಕ್ಷಿಸಲು ನೆರವಾಗುವುದೆಂದು ರಾಜ್ಯದ ಚುನಾವಣಾಧಿಕಾರಿ ಶ್ರೀ ಮಹಮದ್ ಪೀರ್ ಅವರು ಇಂದು ಇಲ್ಲಿ ತಿಳಿಸಿದರಲ್ಲದೆ ಅಧಿಕಾರಿ ಸಹಿಯು ಮತಪತ್ರಗಳು ಬೆರಕೆಯಾಗುವುದು ಹಾಗೂ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಹರಿಯುವುದನ್ನು ತಡೆಗಟ್ಟುವುದೆಂದರು.
ಬಂಗಾಳ: ನಕ್ಸಲೀಯರ ದಾಳಿ, ಕೊಲೆಗಳ ಸಂಖ್ಯೆ ಏರಿಕೆ; ಚವಾಣ್
ನವದೆಹಲಿ, ಏ. 29– ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ ಅಂತರಪಕ್ಷ ಕಲಹಗಳು ಕಡಿಮೆಯಾಗಿವೆಯಲ್ಲದೆ ಘೇರಾವೊಗಳು ಸಾಕಷ್ಟು ಪ್ರಮಾಣದಲ್ಲಿ ಇಳಿಮುಖವಾಗಿವೆ ಎಂಬುದು ಅಪರಾಧದ ಅಂಕಿ ಸಂಖ್ಯೆಗಳ ಪ್ರಕಾರ ಗೊತ್ತಾಗಿದೆ ಎಂದು ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.
ಆದರೆ, ನಕ್ಸಲೀಯರ ದಾಳಿಗಳು ಮತ್ತು ಕೊಲೆಗಳು ಹೆಚ್ಚಿವೆಯೆಂದೂ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ಕೂಡಲೇ ಕೆಲವು ದೇಹಗಳು ಪತ್ತೆಯಾದವೆಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.