ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 8 ಮೇ 1970

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:27 IST
Last Updated 7 ಮೇ 2020, 20:27 IST

ಕಂಟ್ರಾಕ್ಟ್‌ ಬಸ್ಸು ತರುವ ‘ಅಸೌಕರ್ಯ’

ಬೆಂಗಳೂರು, ಮೇ 7– ಪ್ರವಾಸಿ ಕಂಟ್ರಾಕ್ಟ್‌ ಬಸ್ಸುಗಳೆಂದು ನಾಮಫಲಕ ಹಾಕಿ ನಿತ್ಯವೂ ಇತರ ಬಸ್ಸುಗಳಂತೆ ಪ್ರಯಾಣಿಕರನ್ನು ಒಯ್ಯುವ ಬಸ್ಸುಗಳಲ್ಲಿ ಇನ್ನು ಮುಂದೆ ಟಿಕೇಟು ಕೊಂಡು ಪ್ರಯಾಣ ಮಾಡುವವರು ದಾರಿಯಲ್ಲಿ ಅಸೌಕರ್ಯಗಳನ್ನು ಎದುರಿಸಬೇಕಾಗಿ ಬರಬಹುದು.

ಕಂಟ್ರಾಕ್ಟ್‌ ಬಸ್ಸುಗಳನ್ನು ನಿತ್ಯದ ಬಸ್ಸುಗಳಾಗಿ ಓಡಿಸುವ ಚಟುವಟಿಕೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಕೆಲವು ತೀವ್ರ ಕ್ರಮಗಳನ್ನು ಕೈಗೊಂಡಿದೆ. ದಾರಿಗಳಲ್ಲಿ ಚೆಕಿಂಗ್‌ ಹಾಗೂ ತಪ್ಪೆಂದು ಕಂಡುಬಂದರೆ ಬಸ್ಸು ಮಾಲೀಕರ ಮೇಲೆ ಕೇಸು ಹೂಡುವುದು, ಈ ಕ್ರಮಗಳ ಪೈಕಿ ಒಂದು.

ADVERTISEMENT

ಕಂಟ್ರಾಕ್ಟು ಬಸ್ಸುಗಳೆಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮದುವೆ ತಂಡ, ವಿದ್ಯಾರ್ಥಿಗಳು ಅಥವಾ ಪ್ರವಾಸಿಗರ ತಂಡದವರು ಮಾಡಿಕೊಂಡ ಬಸ್ಸು. ಈ ಬಸ್ಸುಗಳನ್ನು ದೈನಿಕ ಪ್ರಯಾಣಿಕ ಬಸ್ಸಿನಂತೆ ಉಪಯೋಗಿಸುವುದು ನಿಯಮಗಳ ಪ್ರಕಾರ ನಿಷಿದ್ಧ. ಇಂಥ ಬಸ್ಸುಗಳಲ್ಲಿ ಸಾರ್ವಜನಿಕರು ಪ್ರಯಾಣ ಮಾಡಬಾರದು. ಮಾಡಿದರೆ ದಾರಿಯಲ್ಲಿ ಚೆಕಿಂಗ್‌ ಬಂದರೆ ತೊಂದರೆಗಳಿಗೆ ಒಳಗಾಗುವ ಸಂಭವವಿದೆ ಎಂದು ಸರ್ಕಾರಿ ಪ್ರಕಟಣೆಯೊಂದು ತಿಳಿಸಿದೆ.

ರಾಜಧನ ರದ್ದಿನ ಬಗ್ಗೆ 18ರಂದು ಎರಡು ಮಸೂದೆ ಮಂಡನೆ

ನವದೆಹಲಿ, ಮೇ 7– ಮಾಜಿ ಅರಸರ ರಾಜಧನ ಮತ್ತು ವಿಶೇಷ ಹಕ್ಕುಗಳನ್ನು ರದ್ದುಗೊಳಿಸಲು ಸರ್ಕಾರ ಈ ತಿಂಗಳ 18ರಂದು ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಲಿದೆ.

ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ವೈ.ಬಿ.ಚವಾಣ್‌ ಅವರು ಇಂದು ಈ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಕಾನೂನು ಸಚಿವ ಗೋವಿಂದ ಮೆನನ್‌ ಅವರೂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.