ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ21 ರೂ. ಹೆಚ್ಚು ವೇತನ
ನವದೆಹಲಿ, ಜುಲೈ 9– ಸಕ್ಕರೆ ಕೈಗಾರಿಕೆ ದ್ವಿತೀಯ ವೇತನ ಮಂಡಲಿಯ ಬಹುತೇಕ ಶಿಫಾರಸುಗಳನ್ನೆಲ್ಲಾ ಕೇಂದ್ರ ಸರ್ಕಾರವು ಒಪ್ಪಿಕೊಂಡಿರುವುದರಿಂದ, ರಾಷ್ಟ್ರದ ನಾಲ್ಕು ವಿಭಾಗಗಳಿಗೆ ಸೇರಿದ ಸುಮಾರು ಎರಡು ಲಕ್ಷ ಮಂದಿ ಕುಶಲ ಮತ್ತು ಕುಶಲರಲ್ಲದ ಕೆಲಸಗಾರರು ಕ್ರಮವಾಗಿ 205 ರೂ. 110 ರೂ. ಕನಿಷ್ಠ ಪ್ರಾರಂಭಿಕ ಮೂಲವೇತನಗಳನ್ನು ಪಡೆಯುತ್ತಾರೆ.
1969ನೇ ನವೆಂಬರ್ನಿಂದಲೇ ಕಾರ್ಯರೂಪದಲ್ಲಿ ಬರುವ ಹೆಚ್ಚುವರಿ ವೇತನ ಸೌಲಭ್ಯಗಳು ಐದು ವರ್ಷಗಳವರೆಗೆ ಜಾರಿಯಲ್ಲಿರುತ್ತವೆ.
ಸಕ್ಕರೆ ಕೈಗಾರಿಕೆಯಲ್ಲಿರುವ ಎಲ್ಲಾ ಗುಮಾಸ್ತರಿಗೂ ಮತ್ತು ಮೇಲ್ವಿಚಾರಣೆ ಸಿಬ್ಬಂದಿಗೂ ಅನ್ವಯಿಸುವ ವೇತನ ಮಂಡಲಿ ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಿತು.
ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಬೆಲೆ ಔಷಧ ಮಾರಾಟ ಚಿಲ್ಲರೆ ಅಂಗಡಿ
ನವದೆಹಲಿ, ಜುಲೈ 9– ಅಗತ್ಯಬಿದ್ದಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ನ್ಯಾಯಬೆಲೆ ಔಷಧ ಮಾರಾಟ ಚಿಲ್ಲರೆ ಅಂಗಡಿ ತೆರೆಯುವುದನ್ನು ಸರ್ಕಾರ ಪರಿಶೀಲಿಸುವುದೆಂದು ಪೆಟ್ರೋಲಿಯಂ ಮತ್ತು ರಾಸಾಯನಿಕ ವಸ್ತುಗಳ ಸಚಿವ ಡಾ. ತ್ರಿಗುಣ್ ಸೇನ್ ಅವರು ಇಂದು ಇಲ್ಲಿ ತಮ್ಮ ಸಚಿವ ಶಾಖೆಯ ಸಲಹಾ ಸಮಿತಿ ಸದಸ್ಯರಿಗೆ ಆಶ್ವಾಸನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.