ADVERTISEMENT

ಮಂಗಳವಾರ, 11–3–1969

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:41 IST
Last Updated 10 ಮಾರ್ಚ್ 2019, 19:41 IST

ಮುರಾರಜಿ ಅವರಿಂದ ರಾಜೀನಾಮೆ ಬೆದರಿಕೆ:ಅಂಕೆ ಇಲ್ಲದ ಆರೋಪಕ್ಕೆ ಕೋಪ
ನವದೆಹಲಿ, ಮಾ. 10– ಕೆಲವು ಕಾಂಗ್ರೆಸ್ ಸದಸ್ಯರು ತಮ್ಮ ವಿರುದ್ಧ ಮಾಡುತ್ತಿರುವ ‘ದಾಳಿ’ ನಿಂತು ಈ ‘ತಪ್ಪು’ ಎಸಗುತ್ತಿರುವ ಸದಸ್ಯರು ಶಿಸ್ತಿನ ಅಂಕೆಗೊಳಪಡದಿದ್ದರೆ ತಾವು ರಾಜೀನಾಮೆ ನೀಡಿ ರಾಜಕೀಯರಂಗದಿಂದ ನಿವೃತ್ತರಾಗುವುದಾಗಿ ಇಂದು ಉಪಪ್ರಧಾನಿ ಮುರಾರಜಿ ದೇಸಾಯಿಯವರು ಬೆದರಿಕೆ ಹಾಕಿದರು.

ಎರಡು ವರ್ಷಗಳಿಂದ ತಾವು ಆಪಾದನೆ ಮತ್ತು ಅಪಮಾನಕಾರಕ ಟೀಕೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡಿರುವುದಾಗಿ ನುಡಿದ ಮುರಾರಜಿ, ಪಕ್ಷದಲ್ಲಿ ಬೆಳೆಯುತ್ತಿರುವ ಆಶಿಸ್ತು ಹಾಗೂ ಇನ್ನಿತರ ವಿಷಯಗಳ ಬಗೆಗೆ ಇಂದಿರಾಗಾಂಧಿಯವರ ಹಾಜರಿಯಲ್ಲಿ ತಾವು ಬಿಚ್ಚು ಮನಸ್ಸಿನಿಂದ ಮಾತನಾಡುವುದಾಗಿ ನುಡಿದರು.

ಹುಬ್ಬಳ್ಳಿ ಗಲಭೆ: ನ್ಯಾಯಾಂಗ ವಿಚಾರಣೆ ಇಲ್ಲ:ನೊಂದವರಿಗೆ ಶಕ್ಯವಿದ್ದಷ್ಟು ಪರಿಹಾರ
ಬೆಂಗಳೂರು, ಮಾ. 10– ಹುಬ್ಬಳ್ಳಿಯನ್ನು ಮೊನ್ನೆ ಕಂಪಿಸಿದ ಗಲಭೆಯ ಬಗ್ಗೆ ಪ್ರತ್ಯೇಕ ನ್ಯಾಯಾಂಗ ವಿಚಾರಣೆ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.

ADVERTISEMENT

ಈ ವಿಷಯವನ್ನು ಇಂದು ವಿಧಾನ ಸಭೆಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು, ಆದರೆ ನೊಂದವರಿಗೆ ಎಷ್ಟರ ಮಟ್ಟಿಗೆ ಪರಿಹಾರ ಕೊಡಲು ಸಾಧ್ಯವೋ ಅಷ್ಟರ ಮಟ್ಟಿಗೆ ಅತ್ಯಂತ ಸಹಾನುಭೂತಿಯಿಂದ ಪರಿಶೀಲಿಸಿ ಕೊಡುತ್ತೇವೆ’ ಎಂದು ಒಂದಷ್ಟು ಉದ್ವೇಗಗೊಂಡಿದ್ದ ಸಭೆಗೆ ಭರವಸೆ ನೀಡಿದರು.

ಬಜೆಟ್‌ನಲ್ಲಿ ಬಿರ್ಲಾಗಳಿಗೆ ಮುರಾರಜಿ ರಿಯಾಯಿತಿ:ಮತ್ತೆ ಚಂದ್ರಶೇಖರ್ ಟೀಕೆ
ನವದೆಹಲಿ, ಮಾ. 10– ತಮ್ಮ ವಿರುದ್ಧ ಬಲವಾದ ಶಿಸ್ತಿನ ಕ್ರಮಕ್ಕೆ ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರು ಇಂದು ಬೆಳಿಗ್ಗೆ ಮಾಡಿದ ಒತ್ತಾಯಕ್ಕೆ ಎದೆಗುಂದದ ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ಅಪರಾಹ್ನ ಮುರಾರಜಿ ದೇಸಾಯಿ ಅವರ ವಿರುದ್ಧ ಆರೋಪಗಳನ್ನು ಎತ್ತಿದರು.

1967ರಲ್ಲಿ ಅಲ್ಯೂಮಿನಿಯಂ ಮತ್ತು ರೇಯಾನ್‌ಗಳ ಮೇಲೆ ಸುಂಕಗಳನ್ನು ಇಳಿಸಿದ್ದು ಬಿರ್ಲಾಗಳಿಗೆ ಸಹಾಯ ಮಾಡುವುದಕ್ಕಾಗಿ ಎಂದು ಕಳೆದ ವಾರ ಚಂದ್ರಶೇಖರ್ ಮಾಡಿದ ಆರೋಪಗಳು ‘ಅಗೌರವದಿಂದ ಕೂಡಿವೆ’ ಎಂಬ ದೇಸಾಯಿ ಅವರ ಟೀಕೆಗಳಿಗೆ ಚಂದ್ರಶೇಖರ್ ವಿವರಪೂರ್ಣವಾದ ಹೇಳಿಕೆಯನ್ನಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.