ADVERTISEMENT

ಸೋಮವಾರ, 17–3–1969

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:26 IST
Last Updated 16 ಮಾರ್ಚ್ 2019, 20:26 IST

ಗುಪ್ತ ನಾಗಾ ‘ದಂಡನಾಯಕ’ ಮೋವು ಅಂಗಾಮಿ ಬಂಧನ
ಕೊಹಿಮ, ಮಾ. 16– ಗುಪ್ತ ನಾಗಾ ಸೈನ್ಯದ ದಂಡನಾಯಕ ‘ಜನರಲ್’ ಮೋವು ಅಂಗಾಮಿ ಹಾಗೂ ಸಶಸ್ತ್ರ ವಿದ್ರೋಹಿ ನಾಗಾಗಳ ಒಂದು ತಂಡವನ್ನು ಭಾರತದ ಭದ್ರತಾ ಪಡೆಯವರು ಇಂದು ಬಂಧಿಸಿದರು.

ಚೀನೀ ಮೂಲದ ಭಾರೀ ಪ್ರಮಾಣದ ಶಸ್ತ್ರಗಳನ್ನೂ ಅವರಿಂದ ವಶಪಡಿಸಿಕೊಳ್ಳಲಾಗಿದೆ.

ಚೀನಾದಲ್ಲಿ ದೀರ್ಘಕಾಲ ಗೆರಿಲ್ಲಾ ಯುದ್ಧ ತರಬೇತಿ ಪಡೆದು ಇದೆ ತಾನೆ ಹಿಂದಿರುಗಿದ ಪೀಕಿಂಗ್‌ವಾದಿ ಜನರಲ್ ಮೋವು ಅಂಗಾಮಿ ಹಾಗೂ ಅವನ ‘ಸೈನಿಕ’ರನ್ನು ಕೊಹಿಮಾ ಈಶಾನ್ಯಕ್ಕೆ 80 ಕಿ.ಮೀ. ದೂರದಲ್ಲಿ ಇಂದು ಬೆಳಿಗ್ಗೆ ಬಂಧಿಸಲಾಯಿತು.

ADVERTISEMENT

ಮೋವು ಅಂಗಾಮಿ ಅವರನ್ನು ದೆಹಲಿಗೆ ವಿಮಾನದಲ್ಲಿ ರವಾನಿಸಲಾಗಿದೆ.

ಈ ವಿಷಯವನ್ನು ಬಹಿರಂಗಪಡಿಸಿದ ಅಧಿಕೃತ ವಕ್ತಾರರು ಭಾರೀ ಪ್ರಮಾಣದಲ್ಲಿ ವಿವಿಧ ಬಗೆಯ ಚೀನೀ ಶಸ್ತ್ರ, ಮದ್ದು ಗುಂಡುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.

ಆಶ್ವಾಸನೆ ಈಡೇರಿಕೆ ಭರವಸೆ ದೊರೆಯುವ ತನಕ ‘ನಾವಾಗಿ’ ನೆಲೆ ಬಿಡೆವು
ಬೆಂಗಳೂರು, ಮಾ. 16– ಸರಕಾರ ತಾನು ನೀಡಿದ ಆಶ್ವಾಸನೆಯನ್ನು ಈಡೇರಿಸುವ ಭರವಸೆ ಕೊಡುವವರೆಗೂ ‘ನಾವಾಗಿ’ ಈ ನೆಲ ಬಿಡುವುದಿಲ್ಲವೆಂಬುದು ಶುಕ್ರವಾರ ಸಂಜೆಯಿಂದ ಧರಣಿ ಹೂಡಿರುವ ವಿರೋಧ ಪಕ್ಷದವರು ಇಂದು ಸಂಜೆ ಸ್ಪಷ್ಟಪಡಿಸಿದರು.

ವಿರೋಧ ಪಕ್ಷದ ನಿಲುವನ್ನು ಪುನಃ ಸ್ಪಷ್ಟಪಡಿಸುವ ವಿರೋಧಪಕ್ಷದ ಹೇಳಿಕೆಯಲ್ಲಿ ನಿನ್ನೆ ಮುಖ್ಯಮಂತ್ರಿಯವರು ಹೇಳಿದ ಮಾತುಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ ‘ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನಮ್ಮೊಂದಿಗೆ ಚರ್ಚಿಸುವ ಅಂಶವಿಲ್ಲವೆಂದ ಮೇಲೆ ಅವರಿಗೆ ಉಳಿದಿರುವುದು ಅವರ ಹಾದಿ, ನಮಗೆ ಉಳಿದಿರುವುದು ನಮ್ಮ ದಾರಿ’ ಎಂದು ತಿಳಿಸಲಾಗಿದೆ.

ಕೇಂದ್ರದಲ್ಲಿ ಕ್ಷೇಮಾಭ್ಯುದ ಖಾತೆ ರಚಿಸಲು ಸಲಹೆ
ನವದೆಹಲಿ, ಮಾ. 16– ರಾಷ್ಟ್ರದಲ್ಲಿನ ಕೈಗಾರಿಕಾ ಕಾರ್ಮಿಕರ ಕ್ಷೇಮಾಭ್ಯುದಯ ಸಮಸ್ಯೆಗಳೊಡನೆ ವ್ಯವಹರಿಸುವುದಕ್ಕಾಗಿ ಕೇಂದ್ರದಲ್ಲಿ ‘ಕ್ಷೇಮಾಭ್ಯುದಯ’ ಖಾತೆಯೊಂದನ್ನು ರಚಿಸುವಂತೆ ರಾಷ್ಟ್ರೀಯ ಕಾರ್ಮಿಕ ಆಯೋಗದ ಅಧ್ಯಯನ ತಂಡವು ಸಲಹೆ ಮಾಡಿದೆ.

ವ್ಯಾಪಾರಿ ಲಕ್ಷಣದ ಸರ್ಕಾರಿ ಹಾಗೂ ಖಾಸಗಿ ಉದ್ಯಮ ರಂಗರಳೆರಡಲ್ಲಿಯ ಉದ್ಯಮಗಳನ್ನು ಈ ಖಾತೆಯ ವ್ಯಾಪ್ತಿಯೊಳಕ್ಕೆ ತರಬೇಕೆಂದೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.