ರಾಜಧನ ರದ್ದತಿಗೆ ಕಾಲ ನಿಗದಿ ಮಾಡುವ ನಿರ್ಣಯ ತಿರಸ್ಕೃತ
ನವದೆಹಲಿ, ಆ. 1– ಮಾಜಿ ದೊರೆಗಳಿಗೆ ನೀಡಲಾಗುತ್ತಿರುವ ರಾಜಧನ ಹಾಗೂ ವಿಶೇಷ ಸೌಲಭ್ಯಗಳನ್ನು ಮಹಾತ್ಮ ಗಾಂಧಿ ಶತಾಬ್ದಿ ಸಮಾರಂಭ ನಡೆಯುವ ಈ ವರ್ಷದ ಅಕ್ಟೋಬರ್ 2ರ ವೇಳೆಗೆ ರದ್ದು ಮಾಡಬೇಕೆಂದು ಒತ್ತಾಯಪಡಿಸಿ ಎಸ್.ಎಸ್.ಪಿ. ಸದಸ್ಯ ಶ್ರೀ ರವಿರಾಮ್ ಅವರು ಮಂಡಿಸಿದ್ದ ಖಾಸಗಿ ನಿರ್ಣಯವನ್ನು ಲೋಕಸಭೆ ಇಂದು ತಿರಸ್ಕರಿಸಿತು.
ನಿರ್ಣಯದ ವಿರುದ್ಧ 176 ಮತಗಳೂ, ಪರವಾಗಿ 33 ಮತಗಳೂ ಬಂದು ಅದು ತಿರಸ್ಕೃತವಾದಾಗ ವಾಮವಾದಿ ವಿರೋಧ ಪಕ್ಷಗಳು ‘ನಾಚಿಕೆಗೇಡು’ ಎಂದು ಕೂಗಿದವು.
ಶ್ರೇಷ್ಠ ನ್ಯಾಯಾಧೀಶ ಹೊಂಬೇಗೌಡ ಅವರ ಅಂತ್ಯಸಂಸ್ಕಾರ
ಬೆಂಗಳೂರು, ಆ. 1– ಗುರುವಾರ ರಾತ್ರಿ ನಿದ್ದೆಯಲ್ಲಿದ್ದಾಗ ನಿಧನರಾದ ರಾಜ್ಯದ ಶ್ರೇಷ್ಠ ನ್ಯಾಯಮೂರ್ತಿ ಶ್ರೀ ಎಚ್. ಹೊಂಬೇಗೌಡರ ಕಳೇಬರವನ್ನು ವಿಲ್ಸನ್ಗಾರ್ಡನ್ ಸ್ಮಶಾನದಲ್ಲಿರುವ ಅವರ ಪತ್ನಿಯ ಸಮಾಧಿಯ ಪಕ್ಕದಲ್ಲಿ ಇಂದು ಸಂಜೆ ಸಮಾಧಿ ಮಾಡಲಾಯಿತು.
59 ವರ್ಷದ ಶ್ರೇಷ್ಠ ನ್ಯಾಯಮೂರ್ತಿಯ ಮರಣದ ವಾರ್ತೆಯನ್ನು ಸರ್ಕಾರ ‘ಅತ್ಯಂತ ದುಃಖದಿಂದ’ ವಿಶೇಷ ಗೆಜೆಟ್ಟಿನಲ್ಲಿ ಪ್ರಕಟಿಸಿ, ಬೆಂಗಳೂರು ನಗರದಲ್ಲಿರುವ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಿತು.
ನಾಲ್ಕನೇ ಯೋಜನೆಯಲ್ಲಿ ಬೆಂಗಳೂರಿಗೆ ಟೆಲಿವಿಷನ್
ನವದೆಹಲಿ, ಆ. 1– ನಾಲ್ಕನೇ ಯೋಜನೆಯಲ್ಲಿ ಟೆಲಿವಿಷನ್ ಅಭಿವೃದ್ಧಿಯ ಎರಡನೇ ಹಂತದ ಕಾರ್ಯಕ್ರಮದ ವ್ಯಾಪ್ತಿಗೆ ಬೆಂಗಳೂರನ್ನು ಒಳಪಡಿಸಲಾಗುವುದು.
ಇದನ್ನು ವಾರ್ತಾ ಮತ್ತು ಪ್ರಸಾರ ಖಾತೆ ಸ್ಟೇಟ್ ಸಚಿವ ಶ್ರೀ ಐ.ಕೆ. ಗುಜ್ರಾಲ್ ಅವರು ರಾಜ್ಯಸಭೆಯಲ್ಲಿ ಶ್ರೀರಾಮರೆಡ್ಡಿಯವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೊರಗೆಡವಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.