ದಿನಬಳಕೆ ವಸ್ತುಗಳ ವ್ಯಾಪಾರ, ಹಂಚಿಕೆ ಹೆಚ್ಚು ಸರ್ಕಾರದ ಕೈಗೆ
ಬೆಂಗಳೂರು, ಮಾರ್ಚ್ 30– ದಿನಬಳಕೆ ವಸ್ತುಗಳ ವ್ಯಾಪಾರ ಮತ್ತು ಹಂಚಿಕೆಯಲ್ಲಿ ವ್ಯಾಪಾರಿಗಳಿಂದ ಬಳಕೆದಾರರ ಶೋಷಣೆ ತಪ್ಪಿಸಲು ಈ ಕ್ಷೇತ್ರದಲ್ಲಿ ಸರ್ಕಾರೀಕರಣ ಮತ್ತು ಸರ್ಕಾರಿ ಹಂಚಿಕೆಯನ್ನು ಗಣನೀಯವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.
ಇಂದಿನ ದೊಡ್ಡ ಸಮಸ್ಯೆಯಾಗಿರುವ ಬೆಲೆಗಳ ಏರಿಕೆ ಪ್ರವೃತ್ತಿ ಹಾಗೂ ಬೆಲೆಗಳು ಕುರಿತು ಸರ್ಕಾರದ ನೀತಿಯನ್ನು ಸಮಗ್ರವಾಗಿ ವಿಶ್ಲೇಷಿಸಿದ ಶ್ರೀ ಅರಸು ಅವರು ಈ ದಿಸೆಯಲ್ಲಿ ಸರ್ಕಾರದ ನಿಲುವು ಹಾಗೂ ಭಾವೀ ಕಾರ್ಯಕ್ರಮಗಳ ಕುರಿತ ಹೇಳಿಕೆಯೊಂದನ್ನು ಪ್ರಥಮ ಬಾರಿಗೆ ಸದನಕ್ಕೆ ಒಪ್ಪಿಸಿದರು.
ಭುಟ್ಟೋ ಸರ್ಕಾರ ಬುಡಮೇಲು ಯತ್ನ
ರಾವಲ್ಪಿಂಡಿ, ಮಾರ್ಚ್ 30– ಪಾಕಿಸ್ತಾನ ಸರ್ಕಾರ ಬುಡಮೇಲು ಮಾಡುವ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕೆಲವು ನಾಗರಿಕರು ಮತ್ತು ಸೇನಾಧಿಕಾರಿಗಳ ತಂಡ ಒಂದನ್ನು ಬಂಧಿಸಿರುವುದಾಗಿ ಇಂದು ರಾತ್ರಿ ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.
ಕಳೆದ ವರ್ಷ ನಿವೃತ್ತರಾದ ಇಬ್ಬರು ಸೇನಾಧಿಕಾರಿಗಳೂ ಸೇರಿದಂತೆ ಸೈನಿಕರ ತಂಡ ಒಂದು ಸರ್ಕಾರಕ್ಕೆ ನಿಷ್ಠೆಯಿಂದಿರುವ ಕೆಲವು ಸೈನಿಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರೆಂದು ರಕ್ಷಣಾ ಸಚಿವರು ಹೇಳಿಕೆಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.