ಉತ್ತರಪ್ರದೇಶ: ತ್ರಿಪಾಠಿ ಸಂಪುಟ ರಾಜೀನಾಮೆ
ಲಖನೌ, ಜೂನ್ 12– ಇಪ್ಪತ್ತಾರು ತಿಂಗಳು ಅಧಿಕಾರದಲ್ಲಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಕಮಲಾಪತಿ ತ್ರಿಪಾಠಿ ಅವರ ಸಚಿವ ಸಂಪುಟವು ಇಂದು ಸಂಜೆ ಇಲ್ಲಿ ರಾಜ್ಯಪಾಲ ಅಕ್ಬರ್ ಅಲೀಖಾನ್ ಅವರಿಗೆ ರಾಜೀನಾಮೆ ಸಲ್ಲಿಸಿತು.
ಪರಿಣಾಮವಾಗಿ ಬುಧವಾರ ರಾಜ್ಯವು ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗುತ್ತದೆ.
ರಾಜೀನಾಮೆಗೂ ಮುಂಚೆ 4 ಗಂಟೆ 20 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ಸಂಪುಟದ ಸಭೆಯಲ್ಲಿ ಕಳೆದ ತಿಂಗಳು ರಾಜ್ಯದಲ್ಲಿ ತಲೆಹಾಕಿದ್ದ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ ಬಂಡಾಯ ಪ್ರಕರಣವನ್ನು ಪರಿಶೀಲಿಸಲಾಯಿತು.
ಹುಬ್ಬಳ್ಳಿ ಪೇಟೆಯಲ್ಲಿ ಧಾನ್ಯ ಮಂಗಮಾಯ: ಮಾರಾಟ ಸ್ಥಗಿತ
ಹುಬ್ಬಳ್ಳಿ, ಜೂನ್ 12– ಅಕ್ಕಿ, ಜೋಳ ಮತ್ತು ಗೋಧಿ ಮಾರಾಟವನ್ನು ಹುಬ್ಬಳ್ಳಿ ವರ್ತಕರು ನಿಲ್ಲಿಸಿದ್ದು, ಪೇಟೆಯಲ್ಲಿ ಆಹಾರಧಾನ್ಯಗಳಿಲ್ಲದಿರುವುದರ ಜೊತೆಗೆ ಪಡಿತರ ಪದ್ಧತಿ ಕೂಡ ಅಸಮರ್ಪಕವಾಗಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಸಾಕಷ್ಟು ಆಹಾರಧಾನ್ಯ ಒದಗಿಸದಿದ್ದರೆ ಪರಿಸ್ಥಿತಿ ಸ್ಫೋಟಕವಾಗುವುದೆಂದು ಹುಬ್ಬಳ್ಳಿ–ಧಾರವಾಡ ಮೇಯರ್ ಶ್ರೀ ಎ.ಎಂ. ಬೆಂಗಳೂರಿ ಅವರು ಇಂದು ಮುಖ್ಯಮಂತ್ರಿಗೆ ಕಳುಹಿಸಿರುವ ಒಂದು ತಂತಿ ವರ್ತಮಾನದಲ್ಲಿ ತಿಳಿಸಿದ್ದಾರೆ.
ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರುತ್ತಿರುವುದನ್ನೂ ಅವರು ತಿಳಿಸಿ ಜನರಿಗಾಗಿರುವ ಅಸಮಾಧಾನವನ್ನು ಅವರು ಪ್ರಸ್ತಾಪಿಸಿ ಶೀಘ್ರ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.