ಜಾತಿ ಆಧರಿಸಿ ಹಿಂದುಳಿದಿರುವಿಕೆ ನಿರ್ಧಾರಕ್ಕೆ ಕೇಂದ್ರದ ಅಸಮ್ಮತಿ
ನವದೆಹಲಿ, ಆ. 9– ಹಿಂದುಳಿದಿರುವಿಕೆಯನ್ನು ಜಾತಿ ಅಥವಾ ಜಾತಿಯ ಆಧಾರದ ಮೇಲೆ ನಿರ್ಧರಿಸದೇ ಜನತೆಯ ಆರ್ಥಿಕ ಸ್ಥಾನಮಾನದ ಆಧಾರದ ಮೇಲೆ ನಿರ್ಧರಿಸುವ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿದೆ.
ಇಂದು ರಾಜ್ಯಸಭೆಗೆ ಇದನ್ನು ತಿಳಿಸಿದ ಗೃಹಶಾಖೆ ರಾಜ್ಯ ಸಚಿವ ರಾಂನಿವಾಸ್ ಮಿರ್ಧಾ ಅವರು ಆರ್ಥಿಕವಾಗಿ ಹಿಂದುಳಿದಿರುವುದರ ಆಧಾರದ ಮೇಲೆ ಹಿಂದುಳಿದ ವರ್ಗದ ಜನರ ಪಟ್ಟಿಯನ್ನು ಸಿದ್ಧಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಲಾಗಿದೆ ಎಂದು ಹೇಳಿದರು.
‘ಕಾಕಾ ಕಾಲೇಲ್ಕರ್ರ ಆಯೋಗ 2099 ಕೋಮುಗಳನ್ನು ಹಿಂದುಳಿದ ವರ್ಗವೆಂದು ಪಟ್ಟಿ ಮಾಡಿದೆ. ಈ ಹಿಂದುಳಿದವರ ಪಟ್ಟಿಯಲ್ಲಿ ಮಹಿಳೆಯೂ ಸೇರಿದ್ದಾಳೆ. ಆದರೆ ಮಹಿಳೆಯನ್ನು ಹಿಂದುಳಿದವಳೆಂದು ವರ್ಗೀಕರಿಸಲು ಸರ್ಕಾರ ಒಪ್ಪಿಕೊಳ್ಳಲಿಲ್ಲ’ ಎಂದು ಅವರು ತಿಳಿಸಿದರು.
ಕಾಳಸಂತೆಕೋರರಿಗೆ ಬುದ್ಧಿ ಕಲಿಸಲು ಬೀದಿ ಮೆರವಣಿಗೆ
ಚಿಕ್ಕಮಗಳೂರು, ಆ. 9– ಆಹಾರ ಧಾನ್ಯ ಮತ್ತಿತರ ಅಗತ್ಯ ವಸ್ತುಗಳ ಕಾಳಸಂತೆಕೋರರನ್ನು ಬೀದಿ ಮೆರವಣಿಗೆ ಮಾಡಿಸಲಾಗುವುದು. ಇದರಿಂದ ಅವರು ಮಾಡುತ್ತಿರುವ ತಪ್ಪು ಎಷ್ಟು ಕರಾಳವಾದುದು ಎಂಬುದು ಅವರಿಗೆ ತಿಳಿಯುವುದು ಮಾತ್ರವಲ್ಲ, ಇತರರಿಗೂ ಇದರಿಂದ ಬುದ್ಧಿ ಬರುತ್ತದೆ ಎಂದು ರಾಜ್ಯದ ಆಹಾರ ಸಚಿವೆ ಇನಾನಾಜ್ ಅವರು ಇಂದು ಇಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.