50 ವರ್ಷಗಳ ಹಿಂದೆ ಈ ದಿನ
ಅರಸು ವಿರುದ್ಧ ಕೇಂದ್ರಕ್ಕೆ ದೂರು
ನವದೆಹಲಿ, ಮೇ 5– ಕರ್ನಾಟಕದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರ ವಿರುದ್ಧ ಒಟ್ಟು 99 ದೂರುಗಳಿರುವ ಹಲವು ಮನವಿ ಪತ್ರಗಳು ಕೇಂದ್ರ ಸರ್ಕಾರಕ್ಕೆ ಬಂದಿವೆ ಎಂದು ಗೃಹಸಚಿವ ಬ್ರಹ್ಮಾನಂದ ರೆಡ್ಡಿ ಅವರು ತಮ್ಮ ಖಾತೆ ಕುರಿತ ಸಮಾಲೋಚನಾ ಸಮಿತಿಗೆ ಇಂದು ತಿಳಿಸಿದರು.
ನಿರುದ್ಯೋಗಿಗಳಿಗೆ ಪುಸ್ತಕ ಅಂಗಡಿ
ನವದೆಹಲಿ, ಮೇ 5– ಭಾರತೀಯ ರೈಲ್ವೆಯ ವಿವಿಧ ನಿಲ್ದಾಣಗಳಲ್ಲಿ ಪುಸ್ತಕ ಮಾರಾಟದ ಹತ್ತೊಂಬತ್ತು ಅಂಗಡಿಗಳ ಕಾಂಟ್ರಾಕ್ಟನ್ನು ನಿರುದ್ಯೋಗಿ ಪದವೀಧರರ ಸಹಕಾರ ಸಂಘ ಹಾಗೂ ಪ್ರತ್ಯೇಕ ನಿರುದ್ಯೋಗಿ ಪದವೀಧರರಿಗೆ ಸರ್ಕಾರ ಇದುವರೆಗೆ ನೀಡಿದೆ. ಈ ವಿಷಯವನ್ನು ರಾಜ್ಯಸಭೆಗೆ ಇಂದು ತಿಳಿಸಿದ ರೈಲ್ವೆ ಉಪಸಚಿವ ಬೂಟಾಸಿಂಗ್ ಅವರು ಈಗ 642 ರೈಲ್ವೆ ನಿಲ್ದಾಣಗಳಲ್ಲಿ 744 ಪುಸ್ತಕದ ಅಂಗಡಿಗಳಿವೆ ಎಂದು ಹೇಳಿದರು.
ಅಪಪ್ರಚಾರಕ್ಕೆ ‘ಬಾಡಿಗೆ ಬಾಯಿ’ ಕೆ.ಎಚ್ ಪಾಟೀಲ್ ಆರೋಪ
ಬೆಂಗಳೂರು, ಮೇ 5– ತಮ್ಮ ವಿರುದ್ಧ ಅಪಪ್ರಚಾರ ಮಾಡಲು ‘ಬಾಡಿಗೆ ಬಾಯಿಗಳನ್ನು’ ಬಳಸಲಾಗುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ.ಎಚ್.ಪಾಟೀಲ್ ಅವರು ಇಂದು ಇಲ್ಲಿ ಆಪಾದಿಸಿದರು.
ತಮ್ಮ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಬರೆದ ಭಾಷೆ ನೋಡಿದರೆ, ತಮ್ಮನ್ನು ಹಡೆದವರೂ ತಾವು ತಪ್ಪು ಮಾಡಿದೆವೆಂದು ಭಾವಿಸಬೇಕು ಎಂದು ನುಡಿದ ಅವರು, ‘ನನ್ನ ಜೀವನದಲ್ಲಿ ಇನ್ನೊಬ್ಬರ ಒಂದು ಕಾಸನ್ನೂ ಮೂಸಿನೋಡಿಲ್ಲ’ ಎಂದರು. ‘ಸಮಾಜದಲ್ಲಿ ಇಲ್ಲದ್ದನ್ನು ಕಲ್ಪಿಸಿ ಹೇಳುವ ಭಂಡನಾಲಿಗೆ ಇರಬೇಕು. ಅದಕ್ಕೆ ಅಂಜಿದರೆ, ಅಳುಕಿದರೆ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಪಾಟೀಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.