ಜನಸಂಘ ತಮ್ಮನ್ನು ಕೊಲ್ಲುವ ಮಾತಾಡುತ್ತಿದೆ ಎಂದು ಪ್ರಧಾನಿ ಆರೋಪ
ನವದೆಹಲಿ, ಫೆ. 15– ರಾಜಕೀಯವಾಗಿ ತಮ್ಮನ್ನು ಸೋಲಿಸಲು ವಿಫಲವಾಗಿರುವ ಜನಸಂಘ ತಮ್ಮನ್ನು ಕೊಲ್ಲುವ ಮಾತನಾಡುತ್ತಿದೆ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಆರೋಪಿಸಿದರು.
ಮಧ್ಯ ದೆಹಲಿಯ ಅಜ್ಮಲ್ ಖಾನ್ ಪಾರ್ಕಿನಲ್ಲಿ ಬೃಹತ್ ಸಭೆಯೊಂದನ್ನುಉದ್ದೇಶಿಸಿ ಮಾತನಾಡುತ್ತಿದ್ದ ಅವರು, ತಮ್ಮನ್ನು ಕೊಲ್ಲಬೇಕೆಂದಿದ್ದರೆ ಜನಸಂಘವು ಅದನ್ನು ನೇರವಾಗಿ ಹೇಳಲಿ, ಈ ಗುಸುಗುಸು ಮಾತೇಕೆ ಎಂದರು.
ಕೋಮು ಮನೋಭಾವ, ಭಾರತೀಕರಣದ ಮಾತು, ಭಾರತೀಯ ವಿಮಾನಾಪಹರಣದ ಪ್ರಶ್ನೆಯನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿರುವುದು ಮೊದಲಾದವುಗಳಿಗಾಗಿ ಜನಸಂಘವು ಪ್ರಧಾನಿಯವರ ಕಟು ವಾಕ್ಪ್ರಹಾರಕ್ಕೆ ಗುರಿಯಾಯಿತು.
ರಾಜ್ಯ ಸಂಪುಟದ ವಿಸ್ತರಣೆ ಸಂಭವ ಪಕ್ಷದ ಐಕ್ಯ ಕಾಪಾಡಲು ಕ್ರಮ
ಬೆಂಗಳೂರು, ಫೆ. 15– ಕೆಲವು ಖಾತೆಗಳ ಬದಲಾವಣೆಗಳೊಡನೆ ಸದ್ಯದಲ್ಲೇ ರಾಜ್ಯದ ಮಂತ್ರಿಮಂಡಲದ ವಿಸ್ತರಣೆಯಾಗುವುದೆಂದು ರಾಜಕೀಯ ವಲಯಗಳಲ್ಲಿ ನಿರೀಕ್ಷಿಸಲಾಗಿದೆ.
ಸಚಿವರಾಗಿ ನೇಮಕವಾಗುವವರಲ್ಲಿ ಗುಲ್ಬರ್ಗದ ಶ್ರೀ ನೀಲಕಂಠ ರಾವ್ ಹಾಗೂ ಮದ್ದೂರಿನ ಶ್ರೀ ಮಂಚೇಗೌಡರ ಹೆಸರುಗಳು ಕೇಳಿಬರುತ್ತಿವೆ.
ಈಗ ಪೌರಾಡಳಿತದ ರಾಜ್ಯ ಸಚಿವರಾಗಿರುವ ಶ್ರೀ ಬಿ.ಎಂ.ಪಾಟೀಲ್ ಅವರಿಗೆ ಸಚಿವರಾಗಿ ಬಡ್ತಿ ದೊರಕುವುದು ಖಾತರಿಯೆಂದು ಈ ವಲಯಗಳಲ್ಲಿ ಭಾವಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.