ಬೆಂಗಳೂರು, ಡಿ. 2– ನಿವೃತ್ತಿ ಹೊಂದಿ ತಿಂಗಳು, ವರ್ಷಗಳು ಕಳೆದರೂ ವಿಶ್ರಾಂತಿ ವೇತನ ಮಂಜೂರಾಗಿಲ್ಲ. ಕಚೇರಿಗಳ ಹಾದಿ ತುಳಿದು ತುಳಿದು ಸಾಕಾಗಿಹೋದೆ– ಇದು ಸಾಮಾನ್ಯವಾಗಿ ಬಹುತೇಕ ಮಂದಿ ಪೆನ್ಷನ್ದಾರರ ಬವಣೆ. ಆದರೆ ಇನ್ನು ಮುಂದೆ ಇಂಥ ಬವಣೆ ಆಗಲಿಕ್ಕಿಲ್ಲ ಎಂಬ ಆಸೆಯ ಗೆರೆಯೊಂದು ಮೂಡಿದೆ.
ನಿವೃತ್ತಿ ಹೊಂದಿದ ಕೂಡಲೇ ವಿಶ್ರಾಂತಿವೇತನ ಮಂಜೂರಾಗುವಂತೆ ರಾಜ್ಯ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ ಹಾಗೂ ವಿಶ್ರಾಂತಿ ವೇತನ ನಿಯಮಗಳಿಗೆ ತಿದ್ದುಪಡಿ ಮಾಡಿದೆ.
ಸರ್ಕಾರಿ ನೌಕರನ ಒಟ್ಟು ಇಪ್ಪತ್ತೈದು ವರ್ಷಗಳ ಸೇವೆ ಮುಗಿದ ತಕ್ಷಣ, ಇಲಾಖೆ ಮುಖ್ಯಸ್ಥರು ಆತನ ವಿಶ್ರಾಂತಿವೇತನ ದಸ್ತಾವೇಜನ್ನು ಸಿದ್ಧಪಡಿಸಿ ತಾಳೆ ನೋಡುವು ದಕ್ಕಾಗಿ ಅಕೌಂಟೆಂಟ್ ಜನರಲ್ ಅವರ ಕಚೇರಿಗೆ ಕಳುಹಿಸಿಕೊಡಬೇಕು. ನೌಕರನ ಇಪ್ಪತ್ತೈದು ವರ್ಷಗಳ ಸೇವೆ ಮುಗಿದ ಒಂದು ವಾರದೊಳಗಾಗಿ ದಸ್ತಾವೇಜು ಅಕೌಂಟೆಂಟ್ ಜನರಲ್ ಕಚೇರಿ ತಲುಪಬೇಕು. ಯಾವುದೇ ಸಂದರ್ಭದಲ್ಲೂ ಒಂದು ವಾರಕ್ಕಿಂತ ಹೆಚ್ಚು ಅವಧಿ ತೆಗೆದುಕೊಳ್ಳಬಾರದೆಂದು ಸರ್ಕಾರವು ಇಲಾಖೆ ಮುಖ್ಯಸ್ಥರಿಗೆ ಆದೇಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.