ADVERTISEMENT

50 ವರ್ಷದ ಹಿಂದೆ | ಗುರುವಾರ 15 ಜೂನ್ 1972

ಪ್ರಜಾವಾಣಿ ವಿಶೇಷ
Published 14 ಜೂನ್ 2022, 20:08 IST
Last Updated 14 ಜೂನ್ 2022, 20:08 IST
   

ಪೈಶಾಚಿಕ ಶಸ್ತ್ರಾಸ್ತ್ರ ಬಳಕೆ ನಿಷೇಧಿಸಲು ವಿಶ್ವಕ್ಕೆ ಇಂದಿರಾ ಕರೆ

ಸ್ಟಾಕ್‌ ಹೋಂ, ಜೂನ್ 14– ವಿಶ್ವದ ಜನಸಂಖ್ಯೆಯಲ್ಲಿ ಆರನೇ ಒಂದು ಭಾಗಕ್ಕೆ ಉತ್ತಮ ಜೀವನ ಒದಗಿಸಬೇಕಾದರೆ ಭಾರತ ತನ್ನ ಕೈಗಾರಿಕೆ ಅಭಿವೃದ್ಧಿಪಡಿಸಿಕೊಳ್ಳುವುದನ್ನು ಮುಂದುವರಿಸಲೇಬೇಕು ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ತಿಳಿಸಿದರು.

ಮಾನವ ಪರಿಸರ ಕುರಿತ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಮಲಿನೀಕರಣವನ್ನು ತಡೆಗಟ್ಟಲು ಮತ್ತು ವಿಶ್ವದ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳಲು ಆರ್ಥಿಕ ಬೆಳವಣಿಗೆಯನ್ನು ಸಾವಕಾಶಗೊಳಿಸುವುದೊಂದೇ ಮಾರ್ಗ ಎಂಬ ಕೆಲವರ ವಾದಗಳಿಗೆ ಸವಾಲು ಹಾಕಿದರು.

ADVERTISEMENT

ಅಭಿವೃದ್ಧಿಯು ಪರಿಸರಕ್ಕೆ ಹಾನಿಯುಂಟು ಮಾಡುವಂತಹದು ಎಂದು ಸಿರಿವಂತ ರಾಷ್ಟ್ರಗಳು ಭಾವಿಸಿರಬಹುದು. ಆದರೆ ಭಾರತಕ್ಕೆ ಅಭಿವೃದ್ಧಿಯೇ ಮುಖ್ಯ ಅಗತ್ಯ ಎಂದು ಅವರು ಹೇಳಿದರು.

ದೆಹಲಿಯ ಬಳಿ ವಿಮಾನ ದುರಂತ: 83 ಮಂದಿ ಸಾವು

ನವದೆಹಲಿ, ಜೂನ್‌ 14– ಜಪಾನಿನ ವಿಮಾನ ವೊಂದು ಹರಿಯಾಣ ಗಡಿಯ ಬದರಪುರದ ಬಳಿ ಈ ರಾತ್ರಿ ಅಪಘಾತಕ್ಕೀಡಾಗಿ ಅದರಲ್ಲಿದ್ದ 89 ಮಂದಿ ಪ್ರಯಾಣಿಕರ ಪೈಕಿ 83 ಮಂದಿ ಸತ್ತು, ಇತರ 6 ಮಂದಿ ಗಾಯಗೊಂಡಿದ್ದಾರೆ.

ಟೋಕೊಯೋದಿಂದ ಲಂಡನ್ನಿಗೆ ಹೋಗುವ ಮಾರ್ಗದಲ್ಲಿದ್ದ ಈ ವಿಮಾನವು ಇಲ್ಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿಮಿಷಗಳ ಮುನ್ನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು.

ಹೊತ್ತಿ, ಉರಿಯುತ್ತಿದ್ದ ವಿಮಾನಾವಶೇಷಗಳಲ್ಲಿ ಬಹುತೇಕ ಮಂದಿ ಪ್ರಯಾಣಿಕರು ಸಿಕ್ಕಿಬಿದ್ದು ಸತ್ತರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.