ಮಹಾಜನ್ ಶಿಫಾರಸು ಬಿಟ್ಟು ಅನ್ಯಮಾರ್ಗಕ್ಕೆ ರಾಜ್ಯ ಆಡಳಿತ ಕಾಂಗ್ರೆಸ್ ವಿರೋಧ
ಬೆಂಗಳೂರು, ಮಾರ್ಚ್ 10– ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಪರಿಹಾರಕ್ಕೆ ಕೇಂದ್ರವು ಮಹಾಜನ್ ಶಿಫಾರಸುಗಳ ವ್ಯಾಪ್ತಿಗೆ ಒಳಪಡದ ಬೇರೆ ಯಾವುದೇ ಹೊಸ ದಾರಿ ಹಿಡಿಯುವುದನ್ನು ಆಡಳಿತ ಕಾಂಗ್ರೆಸ್ಸಿನ ಪ್ರದೇಶ ‘ಅಡ್ಹಾಕ್’ ಸಮಿತಿಯು ವಿರೋಧಿಸಿದೆ.
ಕಾವೇರಿ ಯೋಜನೆಗಳಿಗೆ ಕೇಂದ್ರದ ನೆರವು ಬಂದ್: ಕೆ.ಎಲ್.ರಾವ್ ಬೆದರಿಕೆ
ನವದೆಹಲಿ, ಮಾರ್ಚ್ 10– ಯೋಜನಾ ಆಯೋಗದ ಅನುಮತಿಯಿಲ್ಲದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಯನ್ನು ಮೈಸೂರು ಸರ್ಕಾರವು ಮುಂದುವರಿಸಿದರೆ ಅಂತಹ ಯೋಜನೆಗಳಿಗೆ ಕೇಂದ್ರವು ನೆರವು ನೀಡುವುದಿಲ್ಲವೆಂದು ನೀರಾವರಿ ಮತ್ತು ಯೋಜನೆಗಳ ಸಚಿವ ಡಾ. ಕೆ.ಎಲ್.ರಾವ್ ಇಂದು ಲೋಕಸಭೆಯಲ್ಲಿ ಘೋಷಿಸಿದರು.
ಮಂಜೂರಾದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇಲ್ಲವೇ ಸಂಬಂಧಿಸಿದ ರಾಜ್ಯಗಳ ನಡುವೆ ನದಿ ವಿವಾದಗಳನ್ನು ಪರಿಹರಿಸದೆ ಯಾವುದೇ ರಾಜ್ಯವು ಸ್ವೇಚ್ಛಾನುಸಾರ ಯೋಜನೆಗಳನ್ನು ಕೈಗೊಂಡಲ್ಲಿ ಕೇಂದ್ರ ಸರ್ಕಾರವು ಬಹಳ ಅಸಂತುಷ್ಟಗೊಳ್ಳುವುದು ಎಂದು ಅವರು ಹೇಳಿದರು.
ರೈತನ ಬಗ್ಗೆ ಬಾಯಿಮಾತಿನ ಅನುಕಂಪ ಬೇಡ: ಅಗತ್ಯಗಳಿಗೆ ಗಮನ ನೀಡಿ
ಬೆಂಗಳೂರು, ಮಾರ್ಚ್ 10– ರೈತನ ಬಗ್ಗೆ ಬಾಯಿಮಾತಿನ ಅನುಕಂಪ ತೋರದೆ ಅವನ ಅಗತ್ಯಗಳಿಗೆ ಮನಗೊಡಬೇಕೆಂದೂ ಬೆಳೆದ ಧಾನ್ಯದ ಧಾರಣಿವಾಸಿ ಸ್ಥಿಮಿತವಾಗಲು ಯತ್ನ ಅಗತ್ಯವೆಂದೂ ಇಂದು ವಿಧಾನಸಭೆಯಲ್ಲಿ ಕೃಷಿ, ಮೀನುಗಾರಿಕೆ, ಅರಣ್ಯ ಮತ್ತು ಪಶು ಸಂಗೋಪನಾ ಶಾಖೆ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅನೇಕ ಸದಸ್ಯರು ಒತ್ತಾಯ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.