ADVERTISEMENT

50 ವರ್ಷಗಳ ಹಿಂದೆ | ಸೋಮವಾರ, ಜೂನ್‌ 22 1970

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 15:40 IST
Last Updated 21 ಜೂನ್ 2020, 15:40 IST

ಕೈದಿಗಳಿಗಾಗಿ ಕೃಷಿ ಕ್ಷೇತ್ರ ಸ್ಥಾಪಿಸಲು ಯತ್ನ

ಬೆಂಗಳೂರು, ಜೂನ್‌ 21– ಬಂದೀಖಾನೆಯಲ್ಲಿರುವ ಕೈದಿಗಳಿಗಾಗಿ ಸರ್ಕಾರ ದೊಡ್ಡ ಪ್ರಮಾಣದ ಕೃಷಿ ಕ್ಷೇತ್ರವೊಂದನ್ನು ತುಂಗಭದ್ರಾ ಅಚ್ಚುಕಟ್ಟಿನಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಈ ಕಾರ್ಯಕ್ಕೆ ರಾಯಚೂರು ಜಿಲ್ಲೆಯಲ್ಲಿ ಕನಿಷ್ಠ ಇನ್ನೂರು ಎಕರೆಗಳಷ್ಟು ಜಮೀನನ್ನು ಪಡೆಯಲು ಯತ್ನ ಮಾಡಲಾಗಿದೆ.

ನಾಲ್ಕು ಗೋಡೆಗಳ ಆವರಣದಲ್ಲಿ ಹೊರಗಿನ ಸಂಪರ್ಕ ಇಲ್ಲದಂತೆ ಕೈದಿಗಳನ್ನಿಡುವುದರಿಂದ ಅವರ ಮಾನಸಿಕ ಪರಿವರ್ತನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕದೆಂಬುದನ್ನು ಮನಗಂಡ ಸರ್ಕಾರ ಪ್ರಥಮ ಬಾರಿಗೆ ಮಲಪ್ರಭಾ ಕಾಲುವೆಗಳನ್ನು ತೋಡುವ ಕಾರ್ಯದಲ್ಲಿ ಸುಮಾರು 200 ಕೈದಿಗಳನ್ನು ಬಳಸಿತು. ಅದರಿಂದ ಉತ್ತೇಜನಕಾರಿ ಫಲ ಕಂಡುಬಂದುದರಿಂದ, ಈ ರೀತಿಯ ಕಾರ್ಯಕ್ಕೆ ಅವರು ಹೊಂದಿಕೊಂಡದ್ದರಿಂದ, ಕೃಷಿರಂಗದಿಂದ ಬಂದ ಕೈದಿಗಳನ್ನು ಅವರಿಗೆ ಚಿರಪರಿಚಿತವಾದ ಕೃಷಿ ಕಾರ್ಯದಲ್ಲಿ ತೊಡಗಿಸಲು ಈ ಯೋಜನೆಯನ್ನು ಹೊಂದಲಾಗುವುದು.

ADVERTISEMENT

ಇಂಡೊನೀಸಿಯಾ ಮಾಜಿ ಅಧ್ಯಕ್ಷ ಸುಕಾರ್ನೋ ನಿಧನ

ಜಕಾರ್ತಾ, ಜೂನ್‌ 21– ಇಂಡೊನೀಸಿಯಾದ ಮಾಜಿ ಅಧ್ಯಕ್ಷ ಡಾ. ಸುಕಾರ್ನೋ ಅವರು ಇಂದು ಬೆಳಿಗ್ಗೆ 7 ಗಂಟೆಗೆ ಇಲ್ಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ನವದೆಹಲಿ ವರದಿ: ಡಾ. ಸುಕಾರ್ನೋ ಅವರ ನಿಧನದಿಂದ ಆಫ್ರೋ ಏಷ್ಯನ್‌ ವಲಯಕ್ಕೆ ಅತ್ಯಂತ ಹಿರಿಯ ಮತ್ತು ಖ್ಯಾತ ನಾಯಕನ ಮಾರ್ಗದರ್ಶನದ ಕೊರತೆಯಾಗುವುದು. ಸಾಮ್ರಾಜ್ಯಶಾಹಿ ಹಾಗೂ ವಸಾಹತುಶಾಹಿ ವಿರುದ್ಧ ಹಾಗೂ ಇಂಡೊನೀಸಿಯಾ ಸ್ವಾತಂತ್ರ್ಯಕ್ಕಾಗಿ ಅವರು ನಡೆಸಿದ ಹೋರಾಟವು ಅವರ ಇತಿಹಾಸದ ಒಂದು ಭಾಗವಾಗಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.