ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, ಜೂನ್‌ 26 1970

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 15:11 IST
Last Updated 25 ಜೂನ್ 2020, 15:11 IST

ಆರೆಸ್ಸೆಸ್‌ ವಿರುದ್ಧ ಪರೋಕ್ಷ ಕ್ರಮ ದೆಹಲಿಯಲ್ಲಿ 2 ತಿಂಗಳ ನಿಷೇಧಾಜ್ಞೆ

ನವದೆಹಲಿ, ಜೂನ್‌ 25– ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಸೇನಾ ಸ್ವರೂಪದ ಇನ್ನಿತರ ಸಂಸ್ಥೆಗಳ ಚಟುವಟಿಕೆಗಳನ್ನು ಹತ್ತಿಕ್ಕುವ ಪರೋಕ್ಷ ಕ್ರಮವಾಗಿ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ 144ನೇ ಸೆಕ್ಷನ್‌ ಮೇರೆಗೆ ಎರಡು ತಿಂಗಳ ಕಾಲ ನಿಷೇಧಾಜ್ಞೆಯನ್ನು ಇಂದು ಜಾರಿ ಮಾಡಲಾಯಿತು.

ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಅಪಾಯವಿರುವುದರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಶ್ರೀ ಜಿ.ಕೆ.ಅರೋರಾ ಅವರು ತಮ್ಮ ಆಜ್ಞೆಯಲ್ಲಿ ವಿವರಿಸಿದ್ದಾರೆ.

ADVERTISEMENT

ಯಾವುದೇ ಸಂಘ ಸಂಸ್ಥೆಯನ್ನು ನಿರ್ದಿಷ್ಟವಾಗಿ ಹೆಸರಿಸದಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮತೀಯ ಗುಂಪು ಅಥವಾ ಯಾವುದೇ ಕೋಮಿನ ಸದಸ್ಯರು ವ್ಯಾಯಾಮ ಮಾಡುವುದು ಬಿಕ್ಕಟ್ಟಿನ ಸ್ಥಿತಿ ಹೆಚ್ಚಿಸುವ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುವ ಸಂಭವವಿದೆಯೆಂದೂ ಮ್ಯಾಜಿಸ್ಟ್ರೇಟರು ಅಭಿಪ್ರಾಯಪಟ್ಟಿದ್ದಾರೆ.

ಖಾತೆ ಬದಲಾವಣೆ ವಿರುದ್ಧ ದಿನೇಶ್‌ ಸಿಂಗ್ ರಾಜೀನಾಮೆ

ನವದೆಹಲಿ, ಜೂನ್‌ 25– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಆಲೋಚಿಸುತ್ತಿರುವ ಕೇಂದ್ರ ಸಂಪುಟದ ಪ್ರಮುಖ ಬದಲಾವಣೆಗಳಲ್ಲಿ ತಮಗೆ ವಿದೇಶಾಂಗ ಶಾಖೆ ತಪ್ಪಿಸುವ ನಿರ್ಧಾರದ ವಿರುದ್ಧ ಪ್ರತಿಭಟಿಸಿ ಆ ಖಾತೆ ಸಚಿವ ಶ್ರೀ ದಿನೇಶ್‌ ಸಿಂಗ್‌ ಅವರು ಇಂದು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.

ಗೃಹ ಸಚಿವ ಶ್ರೀ ವೈ.ಬಿ.ಚವಾಣ್‌ ಅವರು ತಮ್ಮೊಡನೆ ಪ್ರಧಾನಿ ಇಂದು ನಡೆಸಿದ 45 ನಿಮಿಷಗಳ ಮಾತುಕತೆ ನಂತರ ಹಣಕಾಸು ಶಾಖೆ ವಹಿಸಿಕೊಳ್ಳಲು ಒಪ್ಪಿದ್ದಾರೆಂದು ತಿಳಿದುಬಂದಿದೆ. ರಕ್ಷಣಾ ಸಚಿವ ಶ್ರೀ ಸ್ವರಣ್‌ ಸಿಂಗರು ವಿದೇಶಾಂಗ ಶಾಖೆಗೂ ಶ್ರೀ ಜಗಜೀವನ ರಾಂ ಅವರು ರಕ್ಷಣಾ ಶಾಖೆಗೂ ಸ್ಥಳಾಂತರಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.