71ರೊಳಗಾಗಿ ಎಲ್ಲ ಸರ್ಕಾರಿ ಕೃಷಿಯೋಗ್ಯ ಜಮೀನಿನ ಹಂಚಿಕೆ
ರಾಜೇಂದ್ರನಗರ, ಅ. 14– ಸರ್ಕಾರದ ಅಧೀನದಲ್ಲಿರುವ ಕೃಷಿಯೋಗ್ಯ ಬಂಜರು ಜಮೀನನ್ನು ಭೂಹೀನ ಕೃಷಿ ಕಾರ್ಮಿಕರು ಮತ್ತು ಬಡ ರೈತರಿಗೆ 1971ರ ಕೊನೆಯ ವೇಳೆಗೆ ಹಂಚಬೇಕೆಂಬ ಸೂಚನೆಯನ್ನು ಇಲ್ಲಿ ನಡೆಯುತ್ತಿರುವ ಆಡಳಿತ ಎಐಸಿಸಿ ಇಂದು ಅಂಗೀಕರಿಸಿತು.
ನಿರ್ಣಯಕ್ಕೆ ಯಂಗ್ಟರ್ಕ್ ನಾಯಕ ಕೃಷ್ಣಕಾಂತರು ತಂದ ತಿದ್ದುಪಡಿಯನ್ನು ನಿರ್ಣಯ ಮಂಡಿಸಿದ ಚವಾಣರು ಒಪ್ಪಿಕೊಂಡರು. ರಾಜಕೀಯ ಹಾಗೂ ಆರ್ಥಿಕ ವಿಷಯಗಳನ್ನು ಕಾಂಗ್ರೆಸ್ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಒಟ್ಟುಗೂಡಿಸಿರುವ ಈ ನಿರ್ಣಯ, ಬಲಪಂಥೀಯರ ಪ್ರತಿಗಾಮಿತ್ವ, ವಾಮಪಂಥೀಯರ ಸಾಹಸ ಗಳ ವಿರುದ್ಧ ಹೋರಾಡಲು ನಿರ್ಧರಿಸಿದೆ.
ಅಮೆರಿಕಕ್ಕೆ ಭಾರತದ ಛೀಮಾರಿ
ವಿಶ್ವಸಂಸ್ಥೆ, ಅ. 14– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರಾಟ ಮತ್ತೆ ಆರಂಭಿಸಿ, ಆ ಪ್ರದೇಶದಲ್ಲಿ ಬಿಕ್ಕಟ್ಟು ಹಾಗೂ ಅಭದ್ರತೆ ವಿಷಮಿಸುವಂತೆ ಮಾಡಿರುವುದಕ್ಕಾಗಿ ಅಮೆರಿಕ ಸರ್ಕಾರಕ್ಕೆ ಭಾರತ ಛೀಮಾರಿ ಹಾಕಿತು.
ಅಂತರರಾಷ್ಟ್ರೀಯ ಭದ್ರತೆ ಹೆಚ್ಚಿಸುವ ವಿಷಯದ ಮೇಲಿನ ಚರ್ಚೆಯಲ್ಲಿ ಜನರಲ್ ಅಸೆಂಬ್ಲಿಯ ರಾಜಕೀಯ ಸಮಿತಿಯಲ್ಲಿ ನಿನ್ನೆ ಭಾಷಣ ಮಾಡಿದ ಭಾರತದ ವಿದೇಶಾಂಗ ಶಾಖೆ ಉಪಸಚಿವ ಸುರೇಂದ್ರ ಪಾಲ್ಸಿಂಗ್, ತಮ್ಮ ಭಾಷಣದ ಅಂತ್ಯದಲ್ಲಿ ಈ ವಿಷಯದ ಪ್ರಸ್ತಾಪವೆತ್ತಿ, ಸಂಕ್ಷಿಪ್ತವಾಗಿ, ಆದರೆ ಅಷ್ಟೇ ತೀಕ್ಷ್ಣವಾಗಿ ಅಮೆರಿಕವನ್ನು ಖಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.