ರಾಜ್ಯ ಮರುವಿಂಗಡಣೆ: ಮತ್ತೊಂದು ಆಯೋಗ ರಚನೆ ಸಲಹೆ ತಿರಸ್ಕೃತ
ನವದೆಹಲಿ, ಡಿ. 9– ರಾಜ್ಯ ಮರುವಿಂಗಡಣೆ ಸಂಬಂಧ ದ್ವಿತೀಯ ಆಯೋಗ ರಚಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮತ್ತೆ ತಳ್ಳಿಹಾಕಿತು.
ಕೆಲವು ರಾಜ್ಯಗಳ ನಡುವೆ ಸಮತೋಲನವಿದೆಯೆಂದು ಗೃಹ ಶಾಖೆಯ ಸ್ಟೇಟ್ ಸಚಿವ ಕೆ.ಸಿ. ಪಂತ್ ಅವರು ಉತ್ತರವಿತ್ತು, ರಾಜ್ಯಗಳ ಗಡಿಗಳನ್ನು ಪದೇ ಪದೇ ಬದಲಾಯಿಸಲು ಸರ್ಕಾರ ಬಯಸದೆಂದರು.
ರಾಜಕೀಯ ಚಳವಳಿಗಳ ಮೂಲಕ ಗಡಿಗಳ ಬದಲಾವಣೆಗೆ ಆಗ್ರಹಪಡಿಸುವುದಕ್ಕಿಂತ ಹಿಂದುಳಿದ ಪ್ರದೇಶಗಳ ಆರ್ಥಿಕ ಅಭಿವೃದ್ಧಿಯತ್ತ ಗಮನಕೇಂದ್ರೀಕರಿಸುವುದು ಒಳ್ಳೆಯದೆಂದರು.
‘ಸುಳ್ಳು ಸಾಕ್ಷ್ಯ’ ನೀಡಿದ್ದಕ್ಕಾಗಿ ಎಸ್.ಸಿ. ಮುಖರ್ಜಿಗೆ ಲೋಕಸಭೆ ಛೀಮಾರಿ
ನವದೆಹಲಿ, ಡಿ. 9– ಸಭೆಗೆ ಅಪಚಾರವೆಸಗಿದ್ದಕ್ಕಾಗಿ ಛೀಮಾರಿ ಹಾಕಿಸಿಕೊಳ್ಳಲು ಲೋಕಸಭೆಯ ಮುಂದೆ ಇಂದು ಹಿರಿಯ ಸಿವಿಲ್ ಅಧಿಕಾರಿಯೊಬ್ಬರು ಹಾಜರಾದದ್ದು ಭಾರತದ ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ.
ಕಬ್ಬಿಣ ಮತ್ತು ಉಕ್ಕಿನ ಮಾಜಿ ಡೆಪ್ಯುಟಿ ಕಂಟ್ರೋಲರ್ ಶ್ರೀ ಎಸ್.ಸಿ. ಮುಖರ್ಜಿ ಅವರೇ ಛೀಮಾರಿ ಹಾಕಿಸಿಕೊಂಡವರು.
ಶ್ರೀ ಮುಖರ್ಜಿ ಅವರು ಈಗ ಕಲ್ಕತ್ತದ ಜಂಟಿ ಕಾರ್ಖಾನೆ ಸಮಿತಿಯ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.