ನವದೆಹಲಿ: ಎಡೆಬಿಡದ ಅಮಿತ ಹರ್ಷೋದ್ಗಾರಗಳ ನಡುವೆ ಕಾಂಗ್ರೆಸ್ ಪಕ್ಷದ ಸಂಸದರು ಇಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿ ‘ಸಂಪೂರ್ಣ ವಿಶ್ವಾಸ’ವನ್ನು ದೃಢಪಡಿಸಿದರು.
432 ಮಂದಿ ಕಾಂಗ್ರೆಸ್ ಸಂಸದರ ಪೈಕಿ 330 ಮಂದಿ ಸದಸ್ಯರು ಪಕ್ಷದ ಸಭೆಗೆ ಹಾಜರಾಗಿರುವರೆಂದು ಶ್ರೀಮತಿ ಗಾಂಧಿ ಅವರು ಪ್ರಕಟಿಸಿದರು. ಪ್ರಧಾನಿಯ ಸ್ಥಾನದಿಂದ ಶ್ರೀಮತಿ ಗಾಂಧಿ ಅವರನ್ನು ಉಚ್ಚಾಟನೆ ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ‘ನಿರ್ದೇಶನ’ ಬಂದಿದ್ದರೂ ಕಾಂಗ್ರೆಸ್ನ ಸಂಸತ್ ಸದಸ್ಯರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಸದಸ್ಯರಿಂದ ಬೆಂಬಲ ಪಡೆದು ಅವರು ಮರು ವಿಶ್ವಾಸಮತ ಗಳಿಸಿದರು.
ಸಿಂಡಿಕೇಟ್ ಬೆಂಬಲಿಗರ ಸಭೆ
ನವದೆಹಲಿ, ನ. 13– ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಉಚ್ಚಾಟನೆ ಮಾಡಿದುದರ ಹಿನ್ನೆಲೆಯಲ್ಲಿ ರಾಜಕೀಯ ಪರಿಸ್ಥಿತಿಯನ್ನು ವಿಮರ್ಶಿಸಲು, ಸಿಂಡಿಕೇಟ್ಗೆ ಬೆಂಬಲ ನೀಡುವ ಸಂಸತ್ತಿನ ಕಾಂಗ್ರೆಸ್ ಸದಸ್ಯರು ಇಂದು ಸಂಜೆ ಮುರಾರಜಿ ದೇಸಾಯಿ ಅವರ ನಿವಾಸದಲ್ಲಿ ಸಭೆ ಸೇರಿದ್ದರು.
ಕಾಂಗ್ರೆಸ್ ಪಕ್ಷದ ಹೊಸ ಸಂಸದೀಯ ನಾಯಕನನ್ನು ಚುನಾಯಿಸಲು ಭಾನುವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಎಸ್. ನಿಜಲಿಂಗಪ್ಪನವರ ನಿವಾಸದಲ್ಲಿ ಸಭೆ ಸೇರಲು ಅವರು ನಿರ್ಧರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.