ಇಂದಿರಾಗೆ ಕಾಂಗ್ರೆಸ್ ಸಕ್ರಿಯ ಸದಸ್ಯತ್ವ ಸಸ್ಪೆಂಡ್ ಮಾಡಲು ನಿರ್ಧಾರ
ನವದೆಹಲಿ, ನ. 11– ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯತ್ವದಿಂದ ಪ್ರಧಾನಿ ಇಂದಿರಾ ಗಾಂಧಿಯವರನ್ನು ಸಸ್ಪೆಂಡ್ ಮಾಡಬೇಕೆಂದು ಸಿಂಡಿಕೇಟ್ ಕಾರ್ಯಕಾರಿ ಸಮಿತಿ ನಿರ್ಧರಿಸಿದ್ದು ಈ ಬಗ್ಗೆ ಪ್ರಕಟಣೆಯನ್ನು ನಾಳೆ ಪ್ರಕಟಿಸಲಾಗುವುದೆಂದು ಗೊತ್ತಾಗಿದೆ.
ಐಕಮತ್ಯವನ್ನು ಸಾಧಿಸಲು ಸೇರಿರುವ ಮುಖ್ಯಮಂತ್ರಿಗಳ ಪ್ರಯತ್ನಗಳ ಫಲಿತಾಂಶವನ್ನು ಎದುರು ನೋಡಿ ಈ ಬಗ್ಗೆ ವಿಧ್ಯುಕ್ತ ಪ್ರಕಟಣೆಯನ್ನು ನಾಳೆಗೆ ಮುಂದಕ್ಕೆ ಹಾಕಲಾಗಿದೆ.
ಇಂದಿರಾ ಗಾಂಧಿಯವರ ವಿರುದ್ಧ ಕೈಗೊಳ್ಳಬೇಕಾದ ಕ್ರಮವನ್ನು ಒಳಗೊಂಡಿರುವ ಕರಡು ನಿರ್ಣಯ ಇಂದಿನ ಸಭೆಯಲ್ಲಿ ಆಖೈರು ಸ್ವರೂಪ ತಳೆಯಿತು.
ಏಕತೆ ಸಾಧಿಸುವ ಮುಖ್ಯಮಂತ್ರಿಗಳ ಪ್ರಯತ್ನ ವಿಫಲ
ನವದೆಹಲಿ, ನ. 11– ಕಾಂಗ್ರೆಸ್ ಪಕ್ಷದಲ್ಲಿ ಐಕಮತ್ಯ ಸಾಧಿಸಲು ಸಭೆ ಸೇರಿದ್ದ ಮುಖ್ಯಮಂತ್ರಿಗಳು ಏಳು ಗಂಟೆಗಳ ಸತತ ಚರ್ಚೆಯ ನಂತರ ಯಾವುದೇ ರಾಜಿ ಸೂತ್ರವನ್ನು ಕಂಡುಹಿಡಿಯಲು ವಿಫಲರಾದರು. ಸಭೆಯ ಬಳಿಕ ರಾಜಸ್ತಾನ ಮುಖ್ಯಮಂತ್ರಿ ಮೋಹನಲಾಲ್ ಸುಖಾಡಿಯಾ ಸುದ್ದಿಗಾರರೊಂದಿಗೆ ಮಾತನಾಡಿ, ‘ದುರದೃಷ್ಟವಶಾತ್ ಇದುವರೆಗೆ ಯಾವ ಸೂತ್ರವನ್ನೂ ರೂಪಿಸಲಾಗಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.