ಒಂದು ದೊಡ್ಡ ಪ್ರದರ್ಶನ, ಇನ್ನೊಂದು ವಾರ್ಷಿಕ ಸರ್ಕಸ್ – ಫರ್ನಾಂಡಿಸ್
ಬೆಂಗಳೂರು, ಡಿ. 15– ಮುಂಬೈಯಲ್ಲಿ ನಡೆಯಲಿರುವುದು ‘ವಿಶ್ವದಲ್ಲಿಯೇ ದೊಡ್ಡದಾದ’ ಇನ್ನೊಂದು ಪ್ರದರ್ಶನ, ಅಹಮದಾಬಾದ್ನಲ್ಲಿ ಸೇರಲಿರುವುದು ವಾರ್ಷಿಕ ‘ಸರ್ಕಸ್ಸು’.
ಇಂದಿರಾ ಕಾಂಗ್ರೆಸ್ಸು ಮತ್ತು ನಿಜಲಿಂಗಪ್ಪ ಕಾಂಗ್ರೆಸ್ಸುಗಳ ಅಧಿವೇಶನಗಳಿಗೆ, ಎಸ್ಸೆಸ್ಪಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಾರ್ಜ್ ಫರ್ನಾಂಡಿಸ್ ಅವರು ಮಾಡಿದ ನಾಮಕರಣ ಇದು. ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ಸಿನ ಪ್ರಸ್ತುತ ಸ್ವರೂಪವನ್ನು ಪ್ರಸ್ತಾಪಿಸಿದ ಶ್ರೀ ಫರ್ನಾಂಡಿಸ್, ‘ಇಂದಿರಾ ಗಾಂಧಿಯವರು ತಿಳಿದುಕೊಂಡಿರುವಷ್ಟು ಅಥವಾ ಅವರ ಬೆಂಬಲಿಗರು ಹೇಳಿಕೊಳ್ಳುತ್ತಿರುವಷ್ಟು ಜನಪ್ರಿಯತೆ ಪ್ರಧಾನಿಗೆ ಇಲ್ಲ’ ಎಂದರು.
ಉಪಕುಲಪತಿ ಶ್ರೀ ತುಕೋಳ್ ನೇಮಕದ ಆಜ್ಞೆ
ಬೆಂಗಳೂರು, ಡಿ. 15– ಈವರೆಗೆ ನ್ಯಾಯಮೂರ್ತಿಯಾಗಿದ್ದ ಶ್ರೀ ಟಿ.ಕೆ. ತುಕೋಳ್ ಅವರನ್ನು ಇಂದಿನಿಂದ 3 ವರ್ಷಗಳ ಅವಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಿಸಲಾಗಿದೆ.
ನಾಯಕರಿಗೆ ‘ಜಾತ್ಯತೀತ ಸಮಾಧಿ’
ನವದೆಹಲಿ, ಡಿ. 15– ದಿವಂಗತ ರಾಷ್ಟ್ರೀಯ ನಾಯಕರಿಗಾಗಿ ಅವರ ಜಾತಿ ಮತಗಳನ್ನು ಗಣನೆಗೆ ತೆಗೆದುಕೊಳ್ಳದೆ ‘ಜಾತ್ಯತೀತ ಸಮಾಧಿ’ಯೊಂದನ್ನು ನಿರ್ಮಿಸಬೇಕೆಂಬುದು ಲೋಕಸಭೆಯಲ್ಲಿ ಇಂದು ಜನಸಂಘದ ಸದಸ್ಯ ಶ್ರೀ ಓ.ಪಿ. ತ್ಯಾಗಿ ಅವರ ಸಲಹೆ. ರಾಷ್ಟ್ರೀಯ ನಾಯಕರಿಗಾಗಿ ‘ಸಾಮಾನ್ಯ ಸಮಾಧಿ’ ನಿರ್ಮಿಸುವಂತೆ ಸ್ವತಂತ್ರ ನಾಯಕ ಶ್ರೀ ಎನ್.ಜಿ. ರಂಗಾ ಅವರೂ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.