ಮುಲ್ಕಿ ವಿರುದ್ಧ ಚಳವಳಿ ಉಲ್ಬಣ: 3 ರೈಲು ನಿಲ್ದಾಣಗಳ ಮೇಲೆ ದಾಳಿ
ವಿಜಯವಾಡ, ನ. 22– ಮುಲ್ಕಿ ನಿಯಮಗಳ ವಿರುದ್ಧ ಆಂಧ್ರ ವಿಭಾಗಗಳಲ್ಲಿ ಚಳವಳಿ ಇಂದು ಇನ್ನಷ್ಟು ಉಲ್ಬಣಗೊಂಡು, ಮೂರು ರೈಲು ನಿಲ್ದಾಣಗಳಿಗೆ ಉದ್ರಿಕ್ತ ಗುಂಪು ಬೆಂಕಿ ಇಟ್ಟಿತು. ಚೀರಾಲಾದಲ್ಲಿ ನಿಂತಿದ್ದ ಗೂಡ್ಸ್ ಗಾಡಿಯೊಂದಕ್ಕೆ ಏಳು ಸಾವಿರ ಜನರ ತಂಡ ಬೆಂಕಿ ಹಚ್ಚಿದ್ದರಿಂದ ಡೀಸೆಲ್ ಎಂಜಿನ್ ಹಾಗೂ 30 ವ್ಯಾಗನ್ಗಳು ಸುಟ್ಟುಹೋದವು.
ವಿಜಯವಾಡ–ಮದರಾಸ್ ವಿಭಾಗದಲ್ಲಿನ ಚೀರಾಲಾ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಏಳು ಸಾವಿರ ಮಂದಿಯ ಗುಂಪೊಂದು ನಿಂತಿದ್ದ ಗೂಡ್ಸ್ ರೈಲಿಗೆ ಬೆಂಕಿ ಹಚ್ಚಿದ್ದರಿಂದ, 30 ವ್ಯಾಗನ್ಗಳು ಹಾಗೂ ಡೀಸೆಲ್ ಎಂಜಿನ್ ಸಂಪೂರ್ಣವಾಗಿ ಸುಟ್ಟು ಭಸ್ಮವಾದವು ಎಂದು ಇಲ್ಲಿರುವ ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಕಚೇರಿಗೆ ಅಧಿಕೃತ ಸುದ್ದಿ ಬಂದಿದೆ.
ಈ ಗುಂಪನ್ನು ಚದುರಿಸಲು ರೈಲ್ವೆ ರಕ್ಷಣಾ ಪಡೆಯವರು ಗುಂಡು ಹಾರಿಸಿದರು. ಗುಂಡಿನೇಟಿನಿಂದ ಒಬ್ಬನು ಗಾಯಗೊಂಡ, ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜಾಜಿ ಸಲಹೆ
ಮದರಾಸ್, ನ. 22– ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತಂದು, ಸಾಧ್ಯವಾದಷ್ಟು ಶೀಘ್ರವಾಗಿ ಹೊಸದಾಗಿ ಚುನಾವಣೆಗಳನ್ನು ನಡೆಸಬೇಕೆಂದು ಸ್ವತಂತ್ರ ಪಕ್ಷದ ನಾಯಕ ಸಿ.ರಾಜಗೋಪಾಲಾಚಾರಿ ಅವರು ಸಲಹೆ ಮಾಡಿದ್ದಾರೆ.
ಎಂ.ಜಿ. ರಾಮಚಂದ್ರನ್ ಮತ್ತು ಅವರ ಗುಂಪಿನವರು ಆರಂಭಿಸಿರುವ ಚಳವಳಿಯ ಫಲವಾಗಿ ತಮಿಳುನಾಡಿನಲ್ಲಿ ಉಂಟಾಗಿರುವ ಬದಲಾವಣೆಯಿಂದ ಉದ್ಭವಿಸಿರುವ ಸಮಸ್ಯೆಗೆ ತಮ್ಮ ಮಟ್ಟಿಗೆ ಇದೊಂದೇ ಪರಿಹಾರವೆಂದು ಅವರು ‘ಸ್ವರಾಜ್ಯ’ ಪತ್ರಿಕೆಯ ಈಚಿನ ಸಂಚಿಕೆಯಲ್ಲಿ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.