ಕೇಂದ್ರೋದ್ಯಮ: ಆಕರ್ಷಕ ಸ್ವಯಂ ನಿವೃತ್ತಿ ಯೋಜನೆ
ನವದೆಹಲಿ, ಜೂನ್ 11 (ಪಿಟಿಐ)– ಸಾರ್ವಜನಿಕ ವಲಯದ ಉದ್ಯಮಗಳು ನಷ್ಟಕ್ಕೆ ಗುರಿಯಾಗುವುದನ್ನು ತಡೆಯಲು ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು, 30 ವರ್ಷ ಸೇವೆ ಸಲ್ಲಿಸಿದವರಿಗೆ ಐದು ವರ್ಷಗಳ ವೇತನ ನೀಡುವ ಆಕರ್ಷಕ ಸ್ವಯಂ ನಿವೃತ್ತಿ ಯೋಜನೆಯೊಂದನ್ನು ಇಂದು ಪ್ರಕಟಿಸಿದರು.
ಆಯವ್ಯಯದ ಮೇಲೆ ನಡೆದ ಮೂರು ದಿನಗಳ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಸಚಿವರು, ‘ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುವವರು 30 ವರ್ಷ ಸೇವೆ ಸಲ್ಲಿಸಿದ್ದರೆ, ಅವರಿಗೆ ಈ ಮುನ್ನ ಪ್ರತಿ ವರ್ಷದ ಸೇವೆಗೆ ನೀಡುತ್ತಿದ್ದ 45 ದಿನಗಳ ವೇತನದ ಬದಲಾಗಿ 60 ದಿನಗಳ ವೇತನವನ್ನು ನೀಡಲಾಗುವುದು’ ಎಂದು ಘೋಷಿಸಿದರು.
ವರ್ಗಾವಣೆ ಕಾಟ: ನಿಗೂಢ ಸ್ಥಳಗಳಿಗೆ ಸಚಿವರು
ಬೆಂಗಳೂರು, ಜೂನ್ 11– ಸಂಪುಟ ಪುನರ್ರಚನೆಯ ಹಿನ್ನೆಲೆಯಲ್ಲಿ ಶಾಸಕರ ಒತ್ತಡಗಳಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೆಗ್ಗಡದೇವನಕೋಟೆ ಬಳಿಯ ‘ಜಂಗಲ್ ಲಾಡ್ಜ್’ಗೆ ತೆರಳಿದ್ದರೆ, ವರ್ಗಾವಣೆ ಸಂಬಂಧ ಕೊನೆ ಗಳಿಗೆಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ತರುತ್ತಿರುವ ಪ್ರಭಾವ– ಒತ್ತಡಗಳಿಂದ ಪಾರಾಗಲು ಸಚಿವರು ‘ನಿಗೂಢ’ ಸ್ಥಳಗಳನ್ನು ಸೇರಿದ್ದಾರೆ.
ಜೂನ್ 15ರಂದು ಸಂಪುಟ ಪುನರ್ರಚನೆ ನಡೆಯಲಿದ್ದು, ಜೂನ್ 14ರೊಳಗೆ ಸರ್ಕಾರಿ ನೌಕರರ ಈ ವರ್ಷದ ವರ್ಗಾವಣೆಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ತಾಕೀತು ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ವರ್ಗಾವಣೆ ಕಾರ್ಯ ಮುಗಿಯಬೇಕಾಗಿರುವ ಹಿನ್ನೆಲೆಯಲ್ಲಿ ತಮ್ಮ ಇಲಾಖೆಗೆ ಸೇರಿದ ವರ್ಗಾವಣೆ ಪಟ್ಟಿಯನ್ನು ಅಂತಿಮಗೊಳಿಸಲು ಸಚಿವರುಗಳ ಕಸರತ್ತು ನಡೆಸಿದ್ದಾರೆ.
ಚಂಡಮಾರುತಕ್ಕೆ 568 ಬಲಿ
ಗಾಂಧೀನಗರ, ಜೂನ್ 11 (ಪಿಟಿಐ)– ಗುಜರಾತ್ ಸಮುದ್ರ ತೀರದ ಸೌರಾಷ್ಟ್ರ ಹಾಗೂ ಕಚ್ ಪ್ರದೇಶದಲ್ಲಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 568ಕ್ಕೆ ಏರಿದೆ. ಅಲ್ಲದೆ, ನೂರಾರು ಜನ ಕಣ್ಮರೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.