ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಚರಣ್ ಸಿಂಗ್
ಲಖನೌ ಫೆ. 17: ಭಾರತೀಯ ಕ್ರಾಂತಿದಳದ ರಾಷ್ಟ್ರೀಯ ಸಮಿತಿ ಅಧ್ಯಕ್ಷ 68 ವರ್ಷ ವಯಸ್ಸಿನ ಚರಣ್ ಸಿಂಗ್ ಅವರು ಇಂದು ಮಧ್ಯಾಹ್ನ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಅವಸರವಾಗಿ ಏರ್ಪಡಿಸಿದ್ದ ಈ ಸರಳ ಸಮಾರಂಭದಲ್ಲಿ ಉತ್ತರ ಪ್ರದೇಶ ಆಡಳಿತ ಕಾಂಗ್ರೆಸ್ ಅಧ್ಯಕ್ಷ ಕಮಲಾಪತಿ ತ್ರಿಪಾಠಿ ಮುಂತಾದ ಸಭಿಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು.
ಕೇಂದ್ರ ಸಂಪುಟಕ್ಕೆ ನಂದಾ, ಸಂಜೀವಯ್ಯ
ನವದೆಹಲಿ, ಫೆ. 17: ಕೇಂದ್ರದ ಮಾಜಿ ಗೃಹ ಸಚಿವ ಜಿ.ಎಲ್. ನಂದಾ ಅವರನ್ನು ರೈಲ್ವೆ ಸಚಿವರನ್ನಾಗಿಯೂ ಡಿ. ಸಂಜೀವಯ್ಯನವರನ್ನು ಕಾರ್ಮಿಕ, ಉದ್ಯೋಗ ಹಾಗೂ ಪುನರ್ವಸತಿ ಸಚಿವರನ್ನಾಗಿಯೂ ನೇಮಿಸಿ ಪ್ರಧಾನಿ ಇಂದಿರಾ ಗಾಂಧಿಯವರು ಕೇಂದ್ರ ಸಂಪುಟವನ್ನು ಇಂದು ಪುನರ್ರಚಿಸಿದ್ದಾರೆ.
ಸಂಜೆ ತಮ್ಮನ್ನು ಭೇಟಿ ಮಾಡಿದ ಪ್ರಧಾನಿಯವರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿಯವರು ಈ ನೇಮಕಗಳನ್ನು ಮಾಡಿದ್ದಾರೆ. ನಂದಾ ಮತ್ತು ಸಂಜೀವಯ್ಯನವರು ನಾಳೆ ಅಧಿಕಾರ ವಹಿಸಿಕೊಳ್ಳುವರೆಂದು ರಾಷ್ಟ್ರಪತಿ ಭವನದಿಂದ ಹೊರಟ ಪ್ರಕಟಣೆ ತಿಳಿಸಿದೆ.
ಡಿ.ಡಿ.ಟಿ. ಬಳಕೆಗೆ ನಿಷೇಧ ಅಸಂಭವ
ನವದೆಹಲಿ, ಫೆ. 17: ರಾಷ್ಟ್ರದಲ್ಲಿ ಡಿ.ಡಿ.ಟಿ.ಬಳಕೆಯ ಮೇಲೆ ನಿರ್ಬಂಧವನ್ನಾಗಲೀ ನಿಷೇಧವನ್ನಾಗಲೀ ವಿಧಿಸುವ ಸಂಭವವಿಲ್ಲವೆಂದು ಗೊತ್ತಾಗಿದೆ.ಈ ಕ್ರಿಮಿನಾಶಕದ ಮೇಲೆ ನಿರ್ಬಂಧವನ್ನಾಗಲೀ ನಿಷೇಧವನ್ನಾಗಲೀ ವಿಧಿಸಬಾರದೆಂದು ಈ ವಿಷಯದ ಬಗ್ಗೆ ತಜ್ಞರು ಸಲಹೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.